ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನದ ಖಾತ್ರಿ ನೀಡುವುದಾಗಿದೆ.
ಬಳ್ಳಾರಿ: ಗಾಂಧೀಜಿಯವರ ಹೆಸರಿನ ನರೇಗಾ ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಎಐಕೆಕೆಎಂಎಸ್ ರೈತ ಸಂಘಟನೆಯ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿ ಪಡಿಸುವ ಉದ್ದೇಶದಿಂದ ತಂದಿದ್ದ ನರೇಗಾ ಕಾಯ್ದೆಯ ಬದಲಿಗೆ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ-2025 ಅನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಪ್ರಯತ್ನ ಖಂಡನೀಯ ಎಂದರು.ಈ ಮಸೂದೆಯು ನರೇಗಾ ಕಾಯ್ದೆಯನ್ನು ಮತ್ತು ಅದರಲ್ಲಿದ್ದ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನದ ಖಾತ್ರಿ ನೀಡುವುದಾಗಿದೆ. ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳ ಯಾವುದೇ ಪಾತ್ರವನ್ನು ನಿರಾಕರಿಸುತ್ತಾ, ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿ, ಒಕ್ಕೂಟ ವ್ಯವಸ್ಥೆ ಅಡಿಪಾಯವನ್ನು ನಾಶಗೊಳಿಸುವ ಪ್ರಯತ್ನ ಮಾಡಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಜಾಬ್ ಕಾರ್ಡ್ ಗಳನ್ನು ಸುಧಾರಣೆ ಮಾಡುವ ಘೋಷಣೆಯ ಮೂಲಕ ಗ್ರಾಮೀಣ ಜನರನ್ನು ಉದ್ಯೋಗದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಈ ಯೋಜನೆಯ ಭಾಗವಾಗಿದೆ.ಗ್ರಾಮೀಣ ಬಡ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಒದಗಿಸುವುದು ಈ ಘಳಿಗೆಯ ಅವಶ್ಯಕತೆ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ ಆಗಿರುವಾಗ ಅದರ ಸಂಪೂರ್ಣವಾಗಿ ವಿರುದ್ಧ ಗತಿಯ ನಿಲುವು ತೆಗೆದುಕೊಳ್ಳುತ್ತಿದೆ ಎಂದು ದೂರಿದರು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿದರು. ಸಂಘದ ಸದಸ್ಯರಾದ ಕಾಸಿಂ ಸಾಬ್, ಮಲ್ಲೇಶ್, ಹರೀಶ್, ಬಸವನ ಗೌಡ, ಹನುಮಂತಪ್ಪ, ಪ್ರಮೋದ್ ಇತರರಿದ್ದರು. ಪ್ರಧಾನಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.ಗಾಂಧೀಜಿಯವರ ಹೆಸರಿನ ಮನರೇಗಾ ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಜಿ ರಾಮ್ಜಿ ಕಾಯ್ದೆಯನ್ನು ವಿರೋಧಿಸಿ ಎಐಕೆಕೆಎಂಎಸ್ ರೈತ ಸಂಘಟನೆಯ ಕಾರ್ಯಕರ್ತರು ಬಳ್ಳಾರಿಯ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.