ಸಾರಾಂಶ
ನನ್ನ ಈ ಸಾಧನೆಗೆ ತಂದೆ ಜೊತೆಗೆ ತಹಸೀಲ್ದಾರರಾಗಿ ನಿವೃತ್ತರಾಗಿದ್ದ ತಾತ ಜಿ. ಬೋರಯ್ಯ ಅವರೇ ಸ್ಫೂರ್ತಿ. ಶಾಲಾ ದಿನಗಳಿಂದಲೇ ನಾನು ಜಿಲ್ಲಾಧಿಕಾರಿಯಾಗಬೇಕು ಎಂಬ ಕನಸನ್ನು ಬಿತ್ತಿದರು. ನಾನು ಅದರ ಬೆನ್ನು ಹತ್ತಿದೆ .
ಕನ್ನಡಪ್ರಭ ವಾರ್ತೆ ರಾಮನಗರ
ಯುಪಿಎಸ್ಸಿ ಪರೀಕ್ಷೆಯನ್ನು 7 ಬಾರಿ ಎದುರಿಸಿದ್ದ ರಾಮನಗರದ ಅಜಯ ಕುಮಾರ್ 8ನೇ ಪ್ರಯತ್ನದಲ್ಲಿ ಪಾಸಾಗಿ ಗುರಿ ಸಾಧಿಸಿದ್ದಾರೆ.ರಾಮನಗರ ವಿಜಯ ನಗರ ಬಡಾವಣೆ ವಾಸಿ ಬಿ.ಆದಿಶೇಷ ಮತ್ತು ನಾಗರತ್ನ ದಂಪತಿ ಪುತ್ರ ಅಜಯ ಕುಮಾರ್ ಯುಪಿಎಸ್ ಸಿ ಪರೀಕ್ಷೆಯಲ್ಲಿ 895ನೇ ರ್ಯಾಂಕ್ ಪಡೆದವರು.
ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿ (ಸಾರ್ವಜನಿಕ ಆಡಳಿತ ಮತ್ತು ಸಂಸ್ಕೃತ) ಗಳಿಸಿದ್ದಾರೆ. ಅಜಯ ಕುಮಾರ್ ತಂದೆ ಬಿ.ಆದಿಶೇಷ ಅವರು ಆದಿಚುಂಚನಗಿರಿಯ ಕಾಲಭೈರವೇಶ್ವರ ವೇದ ಆಗಮ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅಧೀಕ್ಷಕರಾಗಿದ್ದರು. ತಾಯಿ ನಾಗರತ್ನ ಗೃಹಿಣಿ. ಇಬ್ಬರು ಸಹೋದರಿಯರಿದ್ದು, ಒಬ್ಬರು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಾರೆ. ಮತ್ತೊಬ್ಬರು ಪದವೀಧರೆಯಾಗಿದ್ದು, ಅವರೂ ಸ್ಪರ್ಧಾತ್ಮಕ ತಯಾರಿ ನಡೆಸುತ್ತಿದ್ದಾರೆ.ಈ ಕುರಿತು ಕನ್ನಡಪ್ರಭದೊಂದಿಗೆ ಸಂತಸ ಹಂಚಿಕೊಂಡ ಅಜಯಕುಮಾರ್ , ನನ್ನ ಈ ಸಾಧನೆಗೆ ತಂದೆ ಜೊತೆಗೆ ತಹಸೀಲ್ದಾರರಾಗಿ ನಿವೃತ್ತರಾಗಿದ್ದ ತಾತ ಜಿ. ಬೋರಯ್ಯ ಅವರೇ ಸ್ಫೂರ್ತಿ. ಶಾಲಾ ದಿನಗಳಿಂದಲೇ ನಾನು ಜಿಲ್ಲಾಧಿಕಾರಿಯಾಗಬೇಕು ಎಂಬ ಕನಸನ್ನು ಬಿತ್ತಿದರು. ನಾನು ಅದರ ಬೆನ್ನು ಹತ್ತಿದೆ ಎಂದರು.
ಈ ಪಯಣದಲ್ಲಿ ದೆಹಲಿಯ ವಾಜಿರಾಂ, ದಿಗ್ಮನಿ, ಪವನ್ ಕುಮಾರ್ ಐಎಎಸ್ ಕೋಚಿಂಗ್ ಸೆಂಟರ್ ಹಾಗೂ ಕರ್ನಾಟಕದ ಡಾ. ಶಿವಕುಮಾರ್ ಸಾರಥ್ಯದ ಅಕ್ಕಾ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೆ. ಜೊತೆಗೆ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರ ಮಾರ್ಗದರ್ಶನ ನನಗೆ ತುಂಬಾ ಉಪಯುಕ್ತವಾಯಿತು ಎಂದು ಅಜಯಕುಮಾರ್ ಹೇಳಿದರು.