ಕನ್ನಡಪ್ರಭ ವಾರ್ತೆ ಮಡಿಕೇರಿ

ಅಕ್ಕಪಡೆ (ಅಕ್ಕ ಫೋರ್ಸ್) ಎಂಬುದು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜಂಟಿ ಯೋಜನೆಯಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಇದನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯು ರಾಜ್ಯದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತಕ್ಷಣದ ರಕ್ಷಣೆ ಮತ್ತು ನೆರವು ನೀಡುವ ಉದ್ದೇಶ ಹೊಂದಿದೆ. ಮಕ್ಕಳ ಸಹಾಯವಾಣಿಯು ಕರ್ನಾಟಕ ಮತ್ತು ಭಾರತದಾದ್ಯಂತ ಮಕ್ಕಳ ರಕ್ಷಣೆಗಾಗಿ ಇರುವ 1098 ಮಕ್ಕಳ ಸಹಾಯವಾಣಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಕೇಶಿನಿ ಎಸ್.ಆರ್. ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದೊಂದಿಗೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ವತಿಯಿಂದ ನಡೆದ ಇಲಾಖಾ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಹಿಳಾ ಸಬಲೀಕರಣ ಘಟಕವು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಅವರಿಗೆ ರಕ್ಷಣೆ, ಭದ್ರತೆ ಒದಗಿಸಲು ಇರುವ ಯೋಜನಾ ಘಟಕವಾಗಿದ್ದು, ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಂತಹ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿ ದೂರನ್ನು ಸಲ್ಲಿಸಬಹುದು ಎಂದರು.ತುರ್ತು ರಕ್ಷಣೆ ಮತ್ತು ಆಶ್ರಯ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ವೈದ್ಯಕೀಯ ನೆರವು, ಆಸ್ಪತ್ರೆಗೆ ದಾಖಲು ಮತ್ತು ಚಿಕಿತ್ಸೆ. ಕಾನೂನು ನೆರವು, ಎಫ್‌ಐಆರ್ ದಾಖಲಿಸಲು ಮತ್ತು ಕಾನೂನು ಸಲಹೆ, ಆಪ್ತ ಸಮಾಲೋಚನೆ ಮಾನಸಿಕ ಸ್ಥೈರ್ಯ ತುಂಬಲು, 24*7 ಸಹಾಯವಾಣಿ 181 ಮಹಿಳಾ ಸಹಾಯವಾಣಿಯ ಮೂಲಕ ಸಂಪರ್ಕ ದೂರು ನೀಡಿ ಸಹಾಯ ಪಡೆದುಕೊಳ್ಳಬಹುದು. 112 ತುರ್ತು ಸಹಾಯವಾಣಿಯಾಗಿದ್ದು ನಿಮಗೆ ಅಗತ್ಯವಿರುವಾಗ ತುರ್ತು ಕರೆ ಮಾಡಿ ರಕ್ಷಣೆ ಪಡೆದುಕೊಳ್ಳಬಹುದು ಎಂದು ವಿವರಿಸಿದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ನಿರ್ಮಲಾ ಎಚ್.ಪಿ. ಮಾತನಾಡಿ, ಮಹಿಳೆಯರ ರಕ್ಷಣೆ, ಸಬಲೀಕರಣಕ್ಕಾಗಿ ಅಕ್ಕ ಪಡೆ ಎಂಬ ಉತ್ತಮ ಸೇವೆಯನ್ನು ನಮಗೆ ನೀಡಿದೆ. ಇದು ಶ್ಲಾಘನೀಯ. ಇಂದು ಮಹಿಳೆಯರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದೆ ಎಂದರು. ಹೆಣ್ಣು ಮಕ್ಕಳ ಬಳಿ ಮೊಬೈಲ್ ಇದ್ದಾಗ ಕಾಲೇಜಿನ ಗೇಟಿನಿಂದ ಹೊರಗೆ ಹೋದಾಗ ಉತ್ತಮ ರೀತಿಯಲ್ಲಿ ಮನೆಯನ್ನು ಸೇರುವುದು, ಮೊಬೈಲನ್ನು ದುರುಪಯೋಗ ಪಡಿಸಿಕೊಳ್ಳದೇ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದುಕೊಂಡು ಜೀವನವನ್ನು ಸಾಧನೆಯ ಹಂತಕ್ಕೆ ಕೊಂಡೊಯ್ಯಬೇಕು ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳಿದ್ದು, ಸಾಧಿಸುವ ಛಲದೊಂದಿಗೆ ಬದುಕನ್ನು ನಡೆಸಬೇಕು ಎಂದು ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳಿಗೆ ಸಹಾಯವಾಗುವಂತಹ ಉತ್ತಮ ಮಾಹಿತಿ ನೀಡಿದ್ದಾರೆ ಎಂದರು. ಅಕ್ಕಪಡೆ ಸಿಬ್ಬಂದಿ, ಕಾಲೇಜು ವಿದ್ಯಾಥಿಗಳು, ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿ ಹಾಜರಿದ್ದರು.