ಪುತ್ತೂರು: ವೇದಿಕೆಗಳು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಉತ್ತೇಜಿಸಲು ಉತ್ತಮ ಅವಕಾಶವಾಗಿದೆ. ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಬಹುದು ಎಂದು ಅಕ್ಷಯ ಸಮೂಹ ಸಂಸ್ಥೆ ಅಧ್ಯಕ್ಷ ಜಯಂತ ನಡುಬೈಲ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಅಕ್ಷಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ‘ಪ್ರಿಸಮ್-2026’ ಇಂಟರ್ಕ್ಲಾಸ್ ಫೆಸ್ಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಕ್ಷಯ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕಿ ರಾಧಿಕಾ ಶೆಟ್ಟಿ ಡಿ.ಎಸ್. ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ನಿರಂತರ ಅಭ್ಯಾಸ, ನೈಜ ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯಗಳ ಅಗತ್ಯ ವಿವರಿಸಿದರು.ಇನ್ನೋರ್ವ ಅತಿಥಿ, ಅಕ್ಷಯ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಮಾತನಾಡಿ ಶ್ರಮ, ದೃಢ ನಿಶ್ಚಯ ಮತ್ತು ಅನುಭವವೇ ಯಶಸ್ಸಿನ ಮೂಲ ಎಂದು ತಿಳಿಸಿದರು.ಅಕ್ಷಯ ಪಿಯು ಕಾಲೇಜು ಪ್ರಾಂಶುಪಾಲೆ ಗಂಗಾರತ್ನ ಮಾತನಾಡಿ ವಿದ್ಯರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಂತರ ವಿದ್ಯಾರ್ಥಿಳಿಗೆ ವಿವಿಧ ಸ್ಪರ್ಧೆ ಹಾಗೂ ಚಟುವಟಿಕೆಗಳು ನಡೆದವು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಬೆಳಿಯೂರುಕಟ್ಟೆ ಸರ್ಕಾರಿ ಹಿ.ಪ್ರಾ.ಶಾಲೆಯ ಮುಖ್ಯಗುರು ಗಣೇಶ್ ಎಸ್. ಪಾಲ್ಗೊಂಡರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದ್ವಿತೀಯ ಬಿಸಿಎ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ದ್ವಿತೀಯ ಫ್ಯಾಷನ್ ಡಿಜೈನ್ ವಿಭಾಗ ರನ್ನರ್ ಅಪ್ ಸ್ಥಾನ ಪಡೆದರು.ಬಿಸಿಎ ವಿಭಾಗ ಮುಖ್ಯಸ್ಥೆ ದೀಕ್ಷಾ ರೈ ಹಾಗೂ ಎಲ್ಲಾ ಉಪನ್ಯಾಸಕರು ಇದ್ದರು. ವಿದ್ಯಾರ್ಥಿನಿ ಸಾನಿಧ್ಯ ಪ್ರಾರ್ಥಿಸಿದರು. ಬೈಟ್ಬ್ಲಿಟ್ಜ್ ಐಟಿ ಕ್ಲಬ್ ಸಂಯೋಜಕಿ ಸೌಜನ್ಯಾ ಎಚ್.ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಸರೋಶ್ ನಾಯಕ್ ಹಾಗೂ ಸುಪ್ರಭ ಕೆ. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಯೋಜಕ ಕಾರ್ತಿಕ್ ಪಿ. ರೈ ವಂದಿಸಿದರು. ವಿದ್ಯಾರ್ಥಿನಿ ಮಾನ್ಯ ನಿರೂಪಿಸಿದರು.