ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಭಾನುವಾರ ಸಂಜೆ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಬಳಿಕ ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಭಾಗವತ್ ಅವರಿಗೆ ಸನಾತನ ಧರ್ಮ ಸಂರಕ್ಷಣೆಯಲ್ಲಿ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ‘''''ಹಿಂದೂ ಸಾಮ್ರಾಟ್’ ಎಂಬ ಬಿರುದು ಹಾಗೂ ‘ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ’ ಸಹಿತ ಸನ್ಮಾನಿಸಿದರು. ಶ್ರೀ ಕೃಷ್ಣನ ಪ್ರಸಾದ, ರಜತ ಫಲಕ ಮತ್ತು ಬೃಹತ್ ಕಡೆಗೋಲುಗಳನ್ನು ಸ್ಮರಣಿಕೆಯಾಗಿ ನೀಡಿದರು.ಸನ್ಮಾನಕ್ಕೆ ಅಭಾರ ವ್ಯಕ್ತಪಡಿಸಿದ ಭಾಗವತ್, ಯಾವುದೇ ಪರಿಸ್ಥಿತಿಯನ್ನು ತಪ್ಪಿಸಿಕೊಂಡು ಓಡುವುದು ನಿಷಿದ್ಧಯುದ್ಧವೇ ಆಗಲಿ, ಯಾವುದೇ ಪರಿಸ್ಥಿತಿಯೇ ಆಗಲಿ ಎದುರಿಸಲೇಬೇಕು ಎಂದು ಸ್ವತಃ ಶ್ರೀ ಕೃಷ್ಣನೇ ಗೀತೆಯ ಆರಂಭದಲ್ಲಿಯೇ ಅರ್ಜನನಿಗೆ ಹೇಳಿದ್ದಾನೆ. ಅಂತಹ ಗೀತೆಯನ್ನು ಜನರ ಭಾಷೆಯಲ್ಲಿಯೂ ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಶ್ರೀಗಳು ಸಮಾಜಕ್ಕೆ ಮಾರ್ಗದರ್ಶನ ಮಾಡುತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ದೇಶವಿದೇಶಗಳಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸನಾತನ ಧರ್ಮದ ರಕ್ಷಣೆ, ಪೋಷಣೆ, ಸಂವರ್ಧನೆಯ ವಿಚಾರದಲ್ಲಿ ಪ್ರತಿಯೊಬ್ಬ ಹಿಂದು ಶೂನ್ಯ ಸಹಿಷ್ಣುವಾಗಿರಬೇಕು, ಸಮಸ್ತ ಸಾಧು ಸಂತ ಸಮಾಜ ಹಿಂದೆಂದಿಗಿಂತ ಹೆಚ್ಚು ಸಮರ್ಥವಾಗಿ ಸಮಾಜಕ್ಕೆ ಧಾರ್ಮಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಮಾರ್ಗದರ್ಶನ ನೀಡಬೇಕು ಎಂದು ಭಾಗವತ್ ಆಶಿಸಿದರು.ಶತಮಾನದ ಹೊಸ್ತಿಲಲ್ಲಿರುವ ಸಂಘವು ದೇಶದಲ್ಲಿ ಸನಾತನ ಧರ್ಮದ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ನೀಡುತ್ತಿರುವ ಕೊಡುಗೆಗಳ ಬಗ್ಗೆ ಅತೀವ ಪ್ರಶಂಸೆ ವ್ಯಕ್ತಪಡಿಸಿದ ಪುತ್ತಿಗೆ ಶ್ರೀಗಳು, ಸಂಘವಿಲ್ಲದಿದ್ದರೆ ಹಿಂದೂಗಳು ದೇಶದಲ್ಲಿ ಮತ್ತಷ್ಟು ಬವಣೆಗಳನ್ನು ಅನುಭವಿಸಬೇಕಾದ ಸಂಭವ ಇತ್ತು. ಆದರೆ ಹೆಡಗೇವಾರ್ರಿಂದ ಭಾಗವತ್ರ ತನಕ ಸಂಘವನ್ನು ಮುನ್ನಡೆಸಿದ ಸಮಸ್ತ ನೇತಾರರೂ ತಮ್ಮ ರಾಷ್ಟ್ರೀಯ ಬದ್ಧತೆ ಹಾಗೂ ತ್ಯಾಗಪೂರ್ಣ ಬದುಕಿನಿಂದ ಅಸಂಖ್ಯ ಜನರಲ್ಲಿ ರಾಷ್ಟ್ರ ಭಕ್ತಿಯ ತೇಜಸ್ಸನ್ನು ಜಾಗೃತಗೊಳಿಸಿದ ಪರಿ ಅನನ್ಯವಾದುದು. ವರ್ತಮಾನದ ಸಂಕೀರ್ಣ ಸ್ಥಿತಿಯಲ್ಲಿ ಭಾಗವತರಂಥವರು ಮತ್ತು ಸಂಘ ಶಕ್ತಿಯ ಅನಿವಾರ್ಯತೆ ಇದೆ ಎಂದರು.ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಸಂಘದ ಹಿರಿಯ ಮುಖಂಡ ಮುಕುಂದ ಜೀ, ಮಠದ ದಿವಾನರಾದ ಎಂ. ನಾಗರಾಜ ಆಚಾರ್ಯ ಮುಂತಾದವರಿದ್ದರು.ಆರಂಭದಲ್ಲಿ ಮಠದ ಮುಂಭಾಗದಲ್ಲಿ ಭಾಗವತ್ ಅವರನ್ನು ವಾದ್ಯಘೋಷ, ಚಂಡೆವಾದನ, ಮಂತ್ರಘೋಷ ಸಹಿತ ಮಠದ ಸಾಂಪದ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು.