ಸಾರಾಂಶ
ಹನೂರು: ಹನೂರು ಪಟ್ಟಣ ಪಂಚಾಯತ್ನ ನೂತನ ಮುಖ್ಯಾಧಿಕಾರಿಯಾಗಿ ಆಶೋಕ್ ಅಧಿಕಾರ ಸ್ವೀಕರಿಸಿ ಮೊದಲ ದಿನವೆ ಪಟ್ಟಣ ಪಂಚಾಯತಿ ಸದಸ್ಯರ ಜೊತೆ ವಿವಿಧ ವಾರ್ಡ್ನ ಸಮಸ್ಯೆಗಳ ಬಗ್ಗೆ ಸಭೆ ನಡೆಸಿದರು. ಗುರುವಾರ ಸಂಜೆ ಹನೂರು ಪಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಸದಸ್ಯರು ಹಾಗೂ ಸಾರ್ವಜನಿಕರ ಮುಖೇನ ಅರಿತು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮವಹಿಸುತ್ತೇನೆ ಎಂದರು. ಶಾಸಕರ ಸಹಕಾರದೊಂದಿಗೆ ಎಲ್ಲ ಸದಸ್ಯರು ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಪಟ್ಟಣವನ್ನಾಗಿ ನಿರ್ಮಿಸಲು ಈಗಾಗಲೇ ಚಿಂತನೆಯಲ್ಲಿದ್ದೇನೆ. ಆದ್ದರಿಂದ ಪಪಂನ 13 ವಾರ್ಡ್ಗಳ ಎಲ್ಲಾ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರಿದರು.ವಿವಿಧ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ, ಎಲ್ಲಾ ಬಡಾವಣೆಗಳಲ್ಲಿ ಬೀದಿ ದೀಪದ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಕಚೇರಿಗೆ ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಎಂದು ಸ್ಥಳದಲ್ಲಿದ್ದ ಎಲ್ಲಾ ಸಿಬ್ಬಂದಿಗೆ ತಿಳಿಸಿದರು. ಹನೂರು ಪಟ್ಟಣದಲ್ಲಿ ಪ್ರಗತಿಯಲ್ಲಿರುವ ಕೆಶಿಫ್ ಅಭಿವೃದ್ಧಿ ಕಾಮಗಾರಿಯೂ ಜರೂರಾಗಿ ಪೂರ್ಣಗೊಳ್ಳಲು ದೂರವಾಣಿ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಗಿರೀಶ್ ಹರೀಶ್, ಸಂಪತ್ ಕುಮಾರ್, ಮಹೇಶ್, ಮಹೇಶ್ನಾಯ್ಕ ಮುಮ್ರಾಜ್ ಬಾನು, ಪವಿತ್ರ ಸುದೇಶ್ ಮುಖಂಡ ಸತೀಶ್ ಕಚೇರಿಯ ಸಿಬ್ಬಂದಿ ಹಾಜರಿದ್ದರು.