ಸಂವಿಧಾನದ ಎಲ್ಲಾ ಆಶಯಗಳು ಬಸವ ತತ್ವದ ಅಂಶಗಳೇ ಆಗಿವೆ-ಶಂಕರ ಬಿದರಿ

| Published : Jan 10 2025, 12:47 AM IST

ಸಾರಾಂಶ

ಭಾರತದ ಸಂವಿಧಾನದ ಎಲ್ಲಾ ಆಶಯಗಳು ಬಸವ ತತ್ವದ ಅಂಶಗಳೇ ಆಗಿದ್ದು, ಬಸವ ತತ್ವದ ಪಾಲನೆಯು ಸಂವಿಧಾನದ ಪಾಲನೆಯೇ ಆಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.

ಹಾವೇರಿ: ಭಾರತದ ಸಂವಿಧಾನದ ಎಲ್ಲಾ ಆಶಯಗಳು ಬಸವ ತತ್ವದ ಅಂಶಗಳೇ ಆಗಿದ್ದು, ಬಸವ ತತ್ವದ ಪಾಲನೆಯು ಸಂವಿಧಾನದ ಪಾಲನೆಯೇ ಆಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 79ನೇ ಹಾಗೂ ಲಿಂ. ಶಿವಲಿಂಗ ಸ್ವಾಮಿಗಳ 16ನೇ ಪುಣ್ಯ ಸ್ಮರಣೋತ್ಸವದ 4ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅನುಭವ ಮಂಟಪದ ಮೂಲ ಆಶಯವೇ ಆಧುನಿಕ ಸಂಸತ್ತಿನ ಆಶಯವಾಗಿದ್ದು, ಬಸವ ತತ್ವವೂ ಜಗತ್ತಿನ ಶ್ರೇಷ್ಠ ತತ್ವವಾಗಿದೆ. ಇಂದು ಸಮಾಜವು ಜಾತಿ, ಉಪಜಾತಿ ಎಂದು ವಿಘಟನೆ ಆಗಿದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲವಾಗಿದ್ದು, ಪರಸ್ಪರ ದ್ವೇಷ, ಅಸೂಯೆ, ಸಂಕುಚಿತ ಭಾವಗಳೆ ತುಂಬಿವೆ. ನೈತಿಕತೆ ಇಲ್ಲವಾಗಿದ್ದು ಸಮಾಜಕ್ಕೆ ತ್ಯಾಗ ಮಾಡುವ ಗುಣವು ಮಾಯವಾಗಿದೆ. ಎಲ್ಲಡೆ ಸ್ವಾರ್ಥ ತುಂಬಿದ್ದು, ಸಮಾಜದ ಹಿತದ ಬದಲಾಗಿ ವ್ಯಕ್ತಿಹಿತ ಚಿಂತನೆ ಹೆಚ್ಚಾಗಿದೆ. ಮಹಾತ್ಮರ ಸ್ಮರಣೆಯು ಹಿಂದಿಗಿಂತಲೂ ಇಂದು ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.ಬಸವಾದಿ ಶಿವಶರಣರು ಜನರಾಡುವ ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ರಚಿಸಿದರು. ರಾಜಾಶ್ರಯವಿಲ್ಲದೇ ಸಮಾಜವನ್ನು ತಿದ್ದುವ ಕೆಲಸ ಅಂದು ಶರಣರ ಕೊಡುಗೆಯಾಗಿದೆ. ದೇಶ ಕಟ್ಟವ ಅನಿವಾರ್ಯತೆ ಇಂದು ಅವಶ್ಯವಾಗಿದೆ. ರಕ್ತ ಮತ್ತು ಬೆವರು ಹರಿಸಿ ದೇಶ ಸೇವೆ ಮಾಡಬೇಕು. ಕಾಯಕ ಸಿದ್ಧಾಂತ ನಮ್ಮ ಧ್ಯೇಯವಾಗಬೇಕು. ಮತ್ತೆ ಕಲ್ಯಾಣ ರಾಜ್ಯ ನಮ್ಮ ಗುರಿಯಾಗಬೇಕು. ಜಾತ್ರೆಗಳು ಕೇವಲ ನೆಪಗಳು, ಈ ಜಾತ್ರೆ ನೆಪದಲ್ಲಿ ಸತ್ಯ, ಪ್ರೀತಿ, ಕಾಯಕ ತತ್ವ ಜಾಗೃತಗೊಳಿಸಬೇಕು ಎಂದು ಹೇಳಿದರು.ಧಾರವಾಡದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪಶು, ಪಕ್ಷಿಗಳು ಪರೋಪಕಾರವೇ ಜೀವನವನ್ನು ಮಾಡಿಕೊಂಡಿವೆ. ಅಂತಹ ಪರೋಪಕಾರದ ಜೀವನವು ಸಂತ ಮಹಾತ್ಮರು ಆಗಿರುತ್ತದೆ. ಶಿವಯೋಗ ಸಾಧನೆಯನ್ನು ಸಮಾಜೋಧಾರ್ಮಿಕ ಉದ್ಧಾರಕ್ಕೆ ಬಳಸಿದ ಮಹಾತ್ಮರಲ್ಲಿ ಹುಕ್ಕೇರಿಮಠದ ಲಿಂ. ಶಿವಬಸವ ಮತ್ತು ಲಿಂ. ಶಿವಲಿಂಗ ಶ್ರೀಗಳು ಅಗ್ರಗಣ್ಯರು. ಅವರ ಪುಣ್ಯ ಸ್ಮರಣೆಯು ಎಲ್ಲ ಮಹಾತ್ಮರ ಸ್ಮರಣೆಯೂ ಆಗಿದೆ ಎಂದು ಹೇಳಿದರು.ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು ಸಮ್ಮುಖ ವಹಿಸಿದ್ದರು. ಹೆಗಾಪುರ ಶಿವಲಿಂಗೇಶ್ವರ ಹಿರೇಮಠದ ಧಾರುಕಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಾವೇರಿ ಓಂ ಸಂಸ್ಥೆಯಿಂದ ನೀಡುವ ಸಾಧಕ ರತ್ನ ಪ್ರಶಸ್ತಿಯನ್ನು ಶಿಗ್ಗಾಂವಿ ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ ಅವರಿಗೆ ನೀಡಲಾಯಿತು. ಪ್ರೌಢಶಾಲೆ ಕಟ್ಟಡ ದಾನಿಗಳನ್ನು ಸನ್ಮಾನಿಸಲಾಯಿತು. ಕಬನೂರಿನ ಜಾನಪದ ಕಲಾ ತಂಡವು ಜೋಗತಿ ನೃತ್ಯವನ್ನು ಪ್ರದರ್ಶಿಸಿತು.ಸಮಾರಂಭದಲ್ಲಿ ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಜಮಖಂಡಿಯ ಓಲೆಮಠದ ಶ್ರೀಗಳು, ಹೊಳಲಿನ ಚನ್ನಬಸವ ದೇವರು, ಸಿ.ಜಿ. ತೋಟಣ್ಣವರ, ಮಲ್ಲಿಕಾರ್ಜನ ಹಾವೇರಿ, ಎಸ್.ಎಸ್. ಗೌಡಪ್ಪನವರ, ಸ್ನೇಹಾ ಹಿರೇಮಠ, ಚನ್ನಪ್ಪ ಸುರಳಿಹಳ್ಳಿ, ಸಂಜೀವಕುಮಾರ ನೀರಲಗಿ, ಗಂಗಾಧರ ಹತ್ತಿ, ನಿರಂಜನ ಮರಡೂರಮಠ, ರತ್ಮಾ ಪಾಟೀಲ, ಎಸ್.ಎಂ. ಮೆಡ್ಲೇರಿ, ಪ್ರಭಾವತಿ ಪುರದ, ಸಿದ್ಧಲಿಂಗೇಶ ಶೆಟ್ಟರ, ಅಶೋಕ ಮಾಗನೂರ, ಅಮೃತಾ ಶೀಲವಂತರ, ಲಲಿತಕ್ಕ ಹೊರಡಿ, ಗಣೇಶ ಮುಷ್ಠಿ, ಮಾಂತಣ್ಣ ಸುರಳಿಹಳ್ಳಿ, ಆಸಂಗಿ ವೀರಬಸವ ದೇವರು, ಬಿ. ಬಸವರಾಜ ಇತರರಿದ್ದರು. ಬಸವರಾಜ ಚಳಗೇರಾ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ತಮಣ್ಣ ಮುದ್ದಿ ವಂದಿಸಿದರು.ಪೂಜ್ಯದ್ವಯರ ಭಾವಚಿತ್ರದ ಮೆರವಣಿಗೆ ಇಂದು: ಹುಕ್ಕೇರಿಮಠದ ಜಾತ್ರೆ ನಿಮಿತ್ತ ಜ.10ರಂದು ಬೆಳಗ್ಗೆ 8ಗಂಟೆಗೆ ಪೂಜ್ಯ ಶ್ರೀಗಳ ಗದ್ದುಗೆಗಳಿಗೆ ಮಹಾಪೂಜೆ, ಬಿಲ್ವಾರ್ಚನೆ, ಮಧ್ಯಾಹ್ಮ 12ಕ್ಕೆ ಮಹಾಗಣಾರಾಧನೆ ನಡೆಯಲಿದೆ. ಸಂಜೆ 4 ಗಂಟೆಗೆ ಲಿಂ. ಶಿವಬಸವ ಮತ್ತು ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರವು ಸಿಂಗರಿಸಿದ ಮಂಟಪದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ವಿವಿಧ ವಾದ್ಯ ತಂಡಗಳು ಮತ್ತು ಜಾನಪದ ಕಲಾ ತಂಡಗಳು, ಆನೆ, ಗೊಂಬೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಸಮಸ್ತ ಸದ್ಭಕ್ತರು ಭಾಗವಹಿಸಿ ಪರಮಪೂಜ್ಯ ಕೃಪೆಗೆ ಪಾತ್ರವಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ಕೋರಿದೆ.