ಭದ್ರಾವತಿಯಲ್ಲಿ ಶರಾವತಿ ಸಂತ್ರಸ್ತರ ಭೂಮಿಯಲ್ಲಿ ಮರಗಳ ತೆರವಿಗೆ ನಿರ್ಲಕ್ಷ್ಯ ಆರೋಪ

| Published : Jan 19 2025, 02:16 AM IST

ಭದ್ರಾವತಿಯಲ್ಲಿ ಶರಾವತಿ ಸಂತ್ರಸ್ತರ ಭೂಮಿಯಲ್ಲಿ ಮರಗಳ ತೆರವಿಗೆ ನಿರ್ಲಕ್ಷ್ಯ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಸಂತ್ರಸ್ತರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ತರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಮರ ತೆರವುಮಾಡದೆ ಕಿರುಕುಳ: ಆರೋಪ । ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕಿನ ಎಮ್ಮೆದೊಡ್ಡಿ (ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ತರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ತರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಗ್ರಾಮದ ಸರ್ವೇ ನಂ.೮ರಲ್ಲಿ ಶರಾವತಿ ಸಂತ್ರಸ್ತರಾದ ಮಂಜಪ್ಪ ಎಂಬುವರಿಗೆ ಕಂದಾಯ ಭೂಮಿ ಮಂಜೂರು ಮಾಡಲಾಗಿದೆ. ಈ ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸುವಂತೆ ಆದೇಶವಿದ್ದರೂ ಸಹ ಕಳೆದ ೭ ವರ್ಷಗಳಿಂದ ಹಲವಾರು ಬಾರಿ ಮರಕಡಿತಲೆ ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಹಲವು ಬಾರಿ ಮರಗಳ ಕಳ್ಳತನ ನಡೆದಿದ್ದು, ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸಹ ವಿನಾಕಾರಣ ದೂರು ನೀಡಿದ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಸಂತ್ರಸ್ತರು ಆರೋಪಿಸಿದರು.

ಈ ನಡುವೆ ಜ.೧೪ರಂದು ಮರಗಳನ್ನು ಕಡಿಯಾಗಿದೆ, ಅರಣ್ಯ ಇಲಾಖೆಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಕಡಿದ ಮರಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಈ ಸಂಬಂಧ ಪ್ರಕರಣ ಸಹ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಸಂಕ್ರಾಂತಿ ಹಬ್ಬದ ದಿನ ಮರ ಕಳ್ಳರು ಅಕ್ರಮವಾಗಿ ಮರಗಳನ್ನು ಕಡಿದಿದ್ದು, ಮಾಹಿತಿ ತಿಳಿದಿದ್ದರೂ ಸಹ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಜೆಡಿಎಸ್ ಪಕ್ಷ ಆರೋಪಿಸಿದೆ.

ಎಮ್ಮೆಹಟ್ಟಿ ಸರ್ವೇ ನಂ. ೮ರಲ್ಲಿ ಅರಣ್ಯ ಇಲಾಖೆ ಬೆಳಸಿದ್ದ ಸುಮಾರು ೩೫ - ೩೭ ಮರಗಳನ್ನು ಮರ ಕಳ್ಳರು ಕಡಿದಿದ್ದು, ಮರಗಳನ್ನು ಸಾಗಿಸುತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ವಲಯದ ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಕ್ರಮಕೈಗೊಳ್ಳದೆ ಇದ್ದಾಗ ನಂತರ ಶಿವಮೊಗ್ಗ ತನಿಖಾದಳಕ್ಕೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ತನಿಖಾದಳದ ಸಿಬ್ಬಂದಿ ಸ್ಥಳಕ್ಕೆ ಹೋಗುವಷ್ಟರಲ್ಲಿ ಸುಮಾರು ೩೦ ಲೋಡ್‌ನಷ್ಟು ಮರಗಳನ್ನು ಸಾಗಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.

ಉಳಿದ ೩ ಲೋಡ್‌ನಷ್ಟು ಮರಗಳನ್ನು ವಶಕ್ಕೆ ಪಡೆಯಲಾಗಿದ್ದು, ವಲಯ ಅರಣ್ಯ ಕಚೇರಿ ಆವರಣದಲ್ಲಿ ಸಂಗ್ರಹಿಸಲಾಗಿದೆ. ಸ್ಥಳೀಯ ಆರಣ್ಯ ಅಧಿಕಾರಿಗಳಿಗೆ ತನಿಖಾ ದಳ ವರದಿ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿರುವುದು ತಿಳಿದು ಬಂದಿದೆ. ಆದರೆ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಭಾವಿ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ತಿಪ್ಪೆ ಸಾರಿಸುವ ಕೆಲಸ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಜೆಡಿಎಸ್ ಪಕ್ಷ ಆರೋಪಿಸಿದ್ದು, ಈ ಸಂಬಂಧ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ತಿಳಿಸಿದೆ. ಎಂದು ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.