ಅಕ್ಕಿ ಪ್ರಮಾಣದಲ್ಲಿ ಕಡಿಮೆ ಕೊಟ್ಟರೆ ನಿರ್ದಾಕ್ಷಿಣ್ಯವಾಗಿ ಕ್ರಮ: ವೇಮಗಲ್ ಮುನಿಯಪ್ಪ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ನೀಡುವ ಅಕ್ಕಿಯಲ್ಲಿ ಕಳ್ಳತನದ ದೂರುಗಳು ಬಂದಿದ್ದು, ನಿಯೋಜನೆಯಾದ ಅಕ್ಕಿ ಪ್ರಮಾಣದಲ್ಲಿ ಕಡಿಮೆ ಕೊಟ್ಟರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಸಹಕಾರ ಒಕ್ಕೂಟದ ಕಚೇರಿಯಲ್ಲಿ ಬುಧವಾರ ನಡೆದ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮಗಳ ಪ್ರಕಾರ ಕಡು ಬಡವರಿಗೆ ನೀಡುವ ಅಂತ್ಯೋದಯ ಕಾರ್ಡಿಗೆ ೩೫ ಕೆ.ಜಿ ಅಕ್ಕಿ ಕೊಡಬೇಕು. ಆದರೆ, ಕೇವಲ ೧೫ ಕೆ.ಜಿ ಕೊಟ್ಟು ಉಳಿಕೆ ೨೦ ಕೆ.ಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಬಳಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಪರಿಶೀಲನೆ ಮಾಡಿದ ನಂತರ ವಾಪಸ್ ಕಾರ್ಡ್ ದಾರರಿಗೆ ಅಕ್ಕಿ ಕೊಡುವ ಪರಿಸ್ಥಿತಿ ಬಂದಿದೆ ಕಡುಬಡವರ ಅಕ್ಕಿಗೂ ಮಾಲೀಕರು ಕನ್ನ ಹಾಕಿದ್ದಾರೆ ಎಂದರೆ ಸುಮ್ಮನೆ ಇರಬೇಕೇ ಎಂದು ಪ್ರಶ್ನೆ ಮಾಡಿದರು.ಆಹಾರ ಇಲಾಖೆ ಉಪನಿರ್ದೇಶಕ ಟಿ.ಎಂ.ಮಲ್ಲಿಕಾರ್ಜುನ ಮಾತನಾಡಿ, ನ್ಯಾಯಾಲಯ ಬೆಲೆ ಅಂಗಡಿಗಳಲ್ಲಿ ಪಡಿತರ ಸಂಬಂಧ ನಾಮಫಲಕ ಪ್ರದರ್ಶಿಸಬೇಕು, ಗ್ರಾಹಕರಿಗೆ ನಿಯೋಜನೆಯ ಅನುಸಾರವಾಗಿ ಕೊಡಬೇಕು ಅಕ್ಕಿ ಕಡಿಮೆ ಕೊಟ್ಟರೆ ೧೯೬೭ಗೆ ಕರೆಮಾಡಿ ಸಾರ್ವಜನಿಕರು ದೂರು ನೀಡಬಹುದು. ಕಡಿಮೆ ಕೊಟ್ಟಿದ್ದರೆ ಕ್ರಮ ವಹಿಸಲು ಶಿಫಾರಸು ಮಾಡಲಾಗುವುದು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮಾಡುವ ತಪ್ಪಿಗೆ ಅಧಿಕಾರಿ ವರ್ಗ ತಲೆಬಗ್ಗಿಸಬೇಕಿದೆ ಇನ್ನೂ ಮುಂದೆ ಅಂತಹ ದೂರುಗಳು ಬರದಂತೆ ನೋಡಿಕೊಳ್ಳಿ ಎಂದರು.
ಸಭೆಯಲ್ಲಿ ಆಹಾರ ನಿರೀಕ್ಷಕ ಸಿ.ವಿ ಮಂಜುನಾಥ್ ಶಿರಸ್ತೇದಾರ್ ಚಂದ್ರಮೋಹನ್, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಶ್ರೀನಿವಾಸರೆಡ್ಡಿ, ಭರತ್, ನವೀನ್ ಕುಮಾರ್ ಇದ್ದರು.