- ಹುಚ್ಚವ್ವನಹಳ್ಳಿ ದನ-ಕರುಗಳಿಗೆ ಆಸರೆಯಾಗಿರುವ ಜಾಗ: ಮಂಜುನಾಥ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ರಿ.ಸ. ನಂ-68ರ ಜಮೀನನ್ನು ಅರಣ್ಯ ಇಲಾಖೆಯಿಂದ ಸರ್ಕಾರ ವಾಪಸ್‌ ಪಡೆದು, ರೈತರ ಹೆಸರಿಗೆ ಸೇಂದಿ ವನ ದರಖಾಸ್ತು ಎಂಬುದಾಗಿ ನಮೂದಿಸಿ, ಗ್ರಾಮದ ಬಡರೈತರಿಗೆ ಉಳಿಸಿಕೊಡಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ, ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪದಾಧಿಕಾರಿಗಳು, ಹುಚ್ಚವ್ವನಹಳ್ಳಿ ರೈತರು, ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಭವನಕ್ಕೆ ತೆರಳಿ, ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ, ಅರಣ್ಯ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ಮನವಿ ಅರ್ಪಿಸಿದರು.


ಹುಚ್ಚವ್ವನಹಳ್ಳಿ ಮಂಜುನಾಥ ಈ ಸಂದರ್ಭ ಮಾತನಾಡಿ, ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಸರ್ವೆ ನಂ-68ರ ಜಮೀನಿನ ಪಹಣಿಯಲ್ಲಿ ಅರಣ್ಯ ಇಲಾಖೆಯೆಂದು ಬರುತ್ತದೆ. ಆದರೆ, ಈ ಹಿಂದೆ ರಾಜ್ಯ ಸರ್ಕಾರದ ಯಾವುದೇ ಪ್ರಸ್ತಾವನೆಯೊಂದಿಗೆ ಈ ಜಮೀನು ಅರಣ್ಯ ಇಲಾಖೆ ಸೇರಿಲ್ಲ. ಹಿಂದಿನ ಅಧಿಕಾರಿಗಳು ದುರುದ್ದೇಶದಿಂದ ಬರೀ ಪಹಣಿಯಲ್ಲಿ ಮಾತ್ರವೇ ಅರಣ್ಯ ಇಲಾಖೆ ಎಂಬುದಾಗಿ ನಮೂದು ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಘಟನೆಯಿಂದ ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಅಡಿಯಲ್ಲಿ ಅರ್ಜಿ ಹಾಕಿದಾಗ ಕಂದಾಯ ಇಲಾಖೆ ಅಧಿಕಾರಿಗಳು ನಿಯಮದ ಪ್ರಕಾರ ಜಮೀನು ಅರಣ್ಯ ಇಲಾಖೆಗೆ ಸೇರಿಲ್ಲ. ಪಹಣಿಯಲ್ಲಿ ಮಾತ್ರ ಹೆಸರು ಸೇರಿಸಲಾಗಿದೆ ಎಂದು ಹಿಂಬರಹ ನೀಡಿದ್ದಾರೆ. ಗ್ರಾಮದ ನಿವಾಸಿಗಳು ಅದೇ ಜಮೀನನ್ನೇ ನಂಬಿಕೊಂಡು ದನ-ಕರು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ತಮ್ಮ ಹೆಸರಿಗೆ ಹುಚ್ಚವ್ವನಹಳ್ಳಿ ಗ್ರಾಮದ ಸರ್ವೆ ನಂ-68ರ ಜಮೀನನ್ನು ಅರಣ್ಯ ಇಲಾಖೆಯಿಂದ ವಾಪಸ್‌ ಪಡೆದು ಶೇಂದಿವನ ದರಖಾಸ್ತು ಎಂಬುದಾಗಿ ನಮೂದಿಸಿ, ಗ್ರಾಮದ ಬಡರೈತರಿಗೆ ಉಳಿಸಲು ಮನವಿ ಮಾಡಿದರು.

ಸಂಘದ ಕರಿಬಸಪ್ಪ, ಸಾದಿಕ್, ಚೌಡಪ್ಪ, ಮಲ್ಲೇಶಪ್ಪ, ಮಂಜಣ್ಣ, ಶಿವಕುಮಾರ, ಲೋಕೇಶಪ್ಪ, ಶೇಖರಪ್ಪ, ಜಾವಿದ್, ಬಸಜ್ಜ, ದಯಾನಂದ ಇತರರು ಇದ್ದರು.

- - -

-8ಕೆಡಿವಿಜಿ6:

ದಾವಣಗೆರೆ ಡಿಸಿ ಕಚೇರಿ ಬಳಿ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ್‌ ಅವರಿಗೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಗ್ರಾಮಸ್ಥರು, ರೈತರು ಮನವಿ ಅರ್ಪಿಸಿದರು.