ಸಾರಾಂಶ
ಹಿಂದೆ ಅದೇ ಪ್ರದೇಶದಲ್ಲಿ ಅನನ್ಯ ಭಟ್, ಸೌಜನ್ಯ ಸೇರಿದಂತೆ ಹಲವು ಹೆಣ್ಣು ಮಕ್ಕಳ ಸಾವಿನ ಪ್ರಕರಣದ ತನಿಖೆಯಲ್ಲಿ ಅಪರಾಧಿಗಳು ಯಾರೆಂದು ಹೊರಗೆ ಬರಲೇ ಇಲ್ಲ. ಆದ್ದರಿಂದ ಈಗ ನಡೆಯುತ್ತಿರುವ ತನಿಖೆಯನ್ನು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಪ್ರಭಾವಕ್ಕೆ ಒಳಗಾಗದೆ ಎಸ್ಐಟಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು.
ಧಾರವಾಡ: ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಧರ್ಮಸ್ಥಳದ ಸುತ್ತಮುತ್ತ ಎರಡು ದಶಕಗಳಲ್ಲಿ ನೂರಾರು ಅಸಹಜ ಸಾವುಗಳು ಸಂಭವಿಸಿವೆ ಎಂಬ ಆರೋಪ ಕೇಳಿಬಂದಿದೆ. ಆ ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅನಾಮಿಕ ಇತ್ತೀಚಿಗೆ ಈ ಕುರಿತು ದೂರು ನೀಡಿದ್ದಾನೆ. ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ಆರಂಭಿಸಿದೆ. ದೂರುದಾರ ತೋರಿಸಿದ ಜಾಗದಲ್ಲಿ ಕೆಲವು ಮೂಳೆ, ತಲೆ ಬುರುಡೆಗಳು ಸಿಕ್ಕಿದೆ ಎಂದು ಕೂಡ ವರದಿಯಾಗಿದೆ.ಹಿಂದೆ ಅದೇ ಪ್ರದೇಶದಲ್ಲಿ ಅನನ್ಯ ಭಟ್, ಸೌಜನ್ಯ ಸೇರಿದಂತೆ ಹಲವು ಹೆಣ್ಣು ಮಕ್ಕಳ ಸಾವಿನ ಪ್ರಕರಣದ ತನಿಖೆಯಲ್ಲಿ ಅಪರಾಧಿಗಳು ಯಾರೆಂದು ಹೊರಗೆ ಬರಲೇ ಇಲ್ಲ. ಆದ್ದರಿಂದ ಈಗ ನಡೆಯುತ್ತಿರುವ ತನಿಖೆಯನ್ನು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಪ್ರಭಾವಕ್ಕೆ ಒಳಗಾಗದೆ ಎಸ್ಐಟಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಹಾಗೂ ಯಾವುದೇ ರೀತಿಯ ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಪತ್ರದ ಮೂಲಕ ಅಗ್ರಹಿಸಲಾಯಿತು.
ಎಐಡಿವೈಓ ಜಿಲ್ಲಾಧ್ಯಕ್ಷ ಭವಾನಿ ಶಂಕರ್ ಗೌಡ, ಪ್ರೀತಿ ಸಿಂಗಾಡೆ, ಪ್ರತಾಪ್ ಸಿಂಗ್ ಜಾದವ್, ಮಲಿಕ್, ಪ್ರಿಯಾ, ಬಾಗು ಇತರರು ಇದ್ದರು.