ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಕ್ಕಳಿಗೆ ಶಿಕ್ಷಣ ಅತ್ಯಂತ ಪ್ರಮುಖ. ಜೀವನದಲ್ಲಿ ಯಶಸ್ವಿ ಆಗಬೇಕಾದರೆ ವಿದ್ಯಾಭ್ಯಾಸದ ಜತೆಯಲ್ಲಿ ಜೀವನ ಮೌಲ್ಯ ಹಾಗೂ ಸಂಸ್ಕಾರ ಗುಣಗಳ ಮೌಲ್ಯವು ತುಂಬಾ ಅಗತ್ಯ ಎಂದು ಡಯಟ್ ಕಾಲೇಜಿನ ಉಪನ್ಯಾಸಕ ಡಾ.ಹರಿಪ್ರಕಾಶ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಲಿಟಲ್ ಎಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಉತ್ತಮ ಆಹಾರ ನೀಡಿ ಒಳ್ಳೆಯ ಜೀವನಶೈಲಿ ರೂಪಿಸಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಬಾಲ್ಯದಿಂದಲೇ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಬಟ್ಟೆಚೀಲಗಳನ್ನು ಉದ್ಯಮಿ ಅಶ್ವತ್ಥ್ ನಾರಾಯಣ ಶೆಟ್ಟಿ ಬಿಡುಗಡೆ ಮಾಡಿ, ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಯೊಬ್ಬ ವ್ಯಕ್ತಿಯು ಪರಿಸರ ಹಾನಿ ಆಗದಂತೆ ಜೀವನಶೈಲಿ ರೂಢಿಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದರು.
ಪ್ರವರ್ತನ ಸಂಸ್ಥೆ ಸಂಸ್ಥಾಪಕಿ ಪ್ರತಿಭಾ ಅರುಣ್ ಮಾತನಾಡಿ, ಮಕ್ಕಳಿಗೆ ನಾವುಗಳು ರಾಮಾಯಣ, ಮಹಾಭಾರತ, ವೀರಯೋಧರ ಕಥೆಗಳನ್ನು ಹಾಗೂ ಹೋರಾಟದ ಚರಿತ್ರೆ ಗಳನ್ನು ಹೇಳುವುದರ ಮುಖಾಂತರ ಬೆಳೆಸಬೇಕು. ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕೋಲರ್ನಿಂಗ್ ಎಡ್ಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಮಿತ್ ತಿವಾರಿ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಿದರು. ಲಿಟಲ್ ಎಲ್ಲಿ ಶಾಲೆಯ ನಿರ್ದೇಶಕ ಅನಿಲ್.ಪಿ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಟಲ್ ಎಲ್ಲಿ ಶಾಲೆಯ ಪ್ರಾಚಾರ್ಯರಾದ ಬಿಂದು ಅನಿಲ್ ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.