ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾನಸಿಕ ಹಾಗೂ ದೈಹಿಕವಾಗಿ ಮಕ್ಕಳು ಆರೋಗ್ಯವಂತರಾಗಿರಬೇಕಾದರೆ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ತುಂಬಾ ಮುಖ್ಯ. ಶಾಲೆಗಳ ಒಟ್ಟಾರೆ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಪ್ರಮುಖವಾದುದು. ಶಿಕ್ಷಣದ ಜತೆ ಮಕ್ಕಳಿಗೆ ಶಿಸ್ತು, ಸಂಸ್ಕಾರ ಕಲಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಾಸವಿ ಶಾಲೆಯಲ್ಲಿ ನಡೆದ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಯೋಗಿಕ ಹಾಗೂ ಬೋಧನಾ ರೂಪದಲ್ಲಿ ದೈಹಿಕ ಶಿಕ್ಷಣವನ್ನು ಮಕ್ಕಳಿಗೆ ಕಲಿಸಲು ಇಲಾಖೆ ಅವಕಾಶ ಕೊಟ್ಟಿದೆ. ಜೂನ್ನಿಂದ ಮಾರ್ಚ್ ವರೆಗೆ ಏನೇನು ಕಾರ್ಯಚಟುವಟಿಕೆ ರೂಪಿಸಬೇಕೆನ್ನುವ ವಿವರ ಕ್ಯಾಲೆಂಡರ್ ನಲ್ಲಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣವೆಂದರೆ ನಿರ್ಲಕ್ಷ್ಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಹಾಗೂ ವಸ್ತು ನಿಷ್ಟವಾಗಿ ಕೆಲಸ ಮಾಡಬೇಕು. ಮುಖ್ಯ ಶಿಕ್ಷಕರು ದೈಹಿಕ ಶಿಕ್ಷಕರ ಚಟುವಟಿಕೆಗಳನ್ನು ತಿಳಿದುಕೊಂಡಿರಬೇಕು.ನಿಗಧಿತ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಾರ ಕೆಲಸ ಮಾಡಿದರೆ ಬೌದ್ಧಿಕ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಮಕ್ಕಳ ಸರ್ವಾಂಗೀಣ ಚಟುವಟಿಕೆಗೆ ಎಲ್ಲರೂ ಕೈಜೋಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮನವಿ ಮಾಡಿದರು. ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಜಯ್ಕುಮಾರ್ ಮಾತನಾಡಿ, ತರಗತಿಯಲ್ಲಿ ವಾತಾವರಣ ಸ್ವಚ್ಚಂದವಾಗಿರಬೇಕಾದರೆ ಶಿಕ್ಷಕರ ಮಕ್ಕಳ ಮನಸ್ಸನ್ನು ಪಾಠದ ಕಡೆಗೆ ಸೆಳೆದು ಸ್ಫೂರ್ತಿಯ ಚಿಲುಮೆಯನ್ನಾಗಿಸಬೇಕು. ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳನ್ನು ಗುರುತಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಭಾಗವಹಿಸುವಂತೆ ಪ್ರೊತ್ಸಾಹಿಸುವ ಜವಾಬ್ದಾರಿ ದೈಹಿಕ ಶಿಕ್ಷಕರ ಹಾಗೂ ಪೋಷಕರ ಮೇಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಮಾತನಾಡಿ, 46 ಅಂಶಗಳಿರುವ ಕ್ರೀಡಾ ಚೇತನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ದೈಹಿಕ ಶಿಕ್ಷಣ ಭವಿಷ್ಯದಲ್ಲಿ ಕಷ್ಟವಾಗಲಿದೆ ಎನ್ನುವುದು ಗೊತ್ತಾಗಲಿ ಎನ್ನುವ ಕಾರಣಕ್ಕಾಗಿ ಕ್ಯಾಲೆಂಡರ್ ಹೊರತರಲಾಗಿದೆ. ಪ್ರತಿ ಶಾಲೆಗಳಲ್ಲಿಯೂ 46 ಅಂಶಗಳನ್ನು ಅನುಷ್ಠಾನಗೊಳಿಸಬೇಕು. ಮಕ್ಕಳಲ್ಲಿ ವಿಶೇಷ ಚೈತನ್ಯ ಮೂಡಿಸುವುದಕ್ಕಾಗಿ ಜಿಲ್ಲೆಯಲ್ಲಿರುವ ಒಂದು ಸಾವಿರ ಶಾಲೆಗಳಿಗೆ ಕ್ಯಾಲೆಂಡರ್ ತಲುಪಬೇಕೆಂದು ಸೂಚಿಸಿದರು. ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಕಲ್ಲೇಶ್ ಮೌರ್ಯ ಮಾತನಾಡಿ, ವಿಶೇಷ ಶಿಕ್ಷಕರನ್ನು ಉಳಿಸಲು ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಸರಿಯಲ್ಲ. 2008ರಲ್ಲಿ ಪಠ್ಯ ಪುಸ್ತಕ ಕೊಟ್ಟರೂ ದೈಹಿಕ ಶಿಕ್ಷಕರ ನೇಮಕಾತಿಯಾಗಿಲ್ಲ. ದೈಹಿಕ ಶಿಕ್ಷಕರಿಗೆ ನಾನಾ ರೀತಿಯ ಸಮಸ್ಯೆಗಳಿವೆ ಸರ್ಕಾರ ಗಮನ ಹರಿಸಬೇಕಿದೆ ಎಂದು ವಿನಂತಿಸಿದರು. ಟಿಪಿಇಒ ಬಿ.ಎಂ.ಚನ್ನಬಸಪ್ಪ ಪ್ರಾಸ್ತಾವಿಕ ಮಾತನಾಡಿದರು. ವಾಸವಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಅಶೋಕ್, ವ್ಯವಸ್ಥಾಪಕ ಗೋಪಾಲಕೃಷ್ಣ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲತ ಇದ್ದರು.