ಸಾರಾಂಶ
ಚಿತ್ರದುರ್ಗದ ಶನಿವಾರ ನಡೆದ ಸರಸ್ವತಿ ಕಾನೂನು ಕಾಲೇಜಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕಾನೂನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇವಲ ಪುಸ್ತಕಗಳ ಅಧ್ಯಯನದಲ್ಲಿಯೇ ಮುಳುಗದೇ, ನ್ಯಾಯಾಲಯದ ಕಲಾಪಗಳನ್ನೂ ವೀಕ್ಷಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ್ ಹೇಳಿದರು.ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾಲೇಜು ಸಂಸ್ಥಾನಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರುಮ ಎಲ್ಲದಕ್ಕೂ ಶಿಕ್ಷಣ ಮೂಲಭೂತ ಹಕ್ಕು. ಕಠಿಣ ಪರಿಶ್ರಮ ಇಲ್ಲದಿದ್ದರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಿಲ್ಲ. ಮೊಬೈಲ್ನಿಂದ ಯುವ ಪೀಳಿಗೆ ಹಾಳಾಗುತ್ತಿದೆ. ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಕಾನೂನು ಶಿಕ್ಷಣ ಪಡೆಯುವವರು ಸುತ್ತಲಿನ ಜಗತ್ತು ವೀಕ್ಷಿಸಬೇಕೆಂದರು.
ಗೊಂದಲದಿಂದ ಹೊರಬಂದು ಜೀವನದಲ್ಲಿ ಏನಾಗಬೇಕೆಂಬುದನ್ನು ನೀವುಗಳೆ ನಿರ್ಧರಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವೆಂದರೆ ಗೋಲ್ಡನ್ ಲೈಫ್. ಈ ಸಂದರ್ಭ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಜೀವನದಲ್ಲಿ ಯಾರಿಗೂ ಕಾಯಿಸಬಾರದು. ಯಾರನ್ನು ಕಾಯಬಾರದು ಎನ್ನುವ ಸಿದ್ಧಾಂತವಿಟ್ಟುಕೊಳ್ಳಬೇಕು. ಏಕಲವ್ಯ ಶಬ್ಧವೇದಿ ಮೂಲಕ ಬಾಣ ಬಿಟ್ಟು ಪ್ರಾಣಿಯನ್ನು ಭೇಟೆಯಾಡುತ್ತಾನೆ. ಅದಕ್ಕೆ ಅವನಲ್ಲಿದ್ದ ಏಕಾಗ್ರತೆ ಕಾರಣ. ಹಾಗಾಗಿ ಕಾನೂನು ವಿದ್ಯಾರ್ಥಿಗಳು ಓದಿನ ಕಡೆ ಏಕಾಗ್ರತೆ ಕೊಟ್ಟರೆ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಮೊಬೈಲ್ ಬಿಟ್ಟು ಅಭ್ಯಾಸ ನಡೆಸಿ:
ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸ್ವಾವಲಂಬಿಯಾಗಿ ಬದುಕಲು ನೂರಾರು ಅವಕಾಶಗಳಿವೆ. ಕಾನೂನು ಪದವಿ ಪಡೆದ ನಂತರ ಏನಾಗಬೇಕು ಎಂಬುದನ್ನು ನೀವುಗಳೇ ನಿರ್ಧರಿಸಬೇಕು. ತಂದೆ-ತಾಯಿಗಳು ಮಕ್ಕಳ ಮೇಲೆ ನಂಬಿಕೆ ಇಟ್ಟಿರುವುದನ್ನು ಹಾಳು ಮಾಡಿಕೊಳ್ಳಬೇಡಿ. ಪದವಿ ಪಡೆದು ಜೀವನ ರೂಪಿಸಿಕೊಳ್ಳಿ. ಪ್ರಸ್ತುತ ಮೊಬೈಲ್ ಕೆಟ್ಟ ಚಟವಾಗಿ ಪರಿಣಿಮಿಸಿದೆ. ಆಸ್ಪತ್ರೆಗಳಲ್ಲಿ ಈಗ ಮೊಬೈಲ್ ಗೀಳಿಗೆ ಬಲಿ ಆಗಿರುವವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಫೇಸ್ಬುಕ್, ವಾಟ್ಸಪ್ ನೋಡುವುದಕ್ಕೆ ನೀಡುವ ಅರ್ಧ ಸಮಯವನ್ನು ಓದಿಗೆ ಕೊಡುವಂತೆ ತಿಳಿಸಿದರು.ಕಾನೂನು ಪದವೀಧರರಿಗೆ ಸಾಕಷ್ಟು ಉದ್ಯೋಗ:
ವೀರವನಿತೆ ಒನಕೆ ಓಬವ್ವಳಲ್ಲಿ ನಿಸ್ವಾರ್ಥತೆ ಇದ್ದುದರಿಂದ ಕೋಟೆಗೆ ಮುತ್ತಿಗೆ ಹಾಕಿದ ಶತ್ರುಗಳನ್ನು ಒನಕೆಯಿಂದ ಸೆದೆಬಡಿದು ಚಿತ್ರದುರ್ಗದ ಕೋಟೆ ರಕ್ಷಿಸಿ ಈಗಲೂ ಎಲ್ಲರ ನೆನಪಿನಲ್ಲಿ ಉಳಿದಿದ್ದಾರೆ. ಅದೇ ರೀತಿ ನೀವುಗಳು ಮತ್ತೊಬ್ಬರಿಗೆ ಸಹಾಯವಾಗುವ ಕೆಲಸ ಮಾಡಿ ಎಲ್ಲರ ನೆನಪಿನಲ್ಲಿ ಉಳಿಯಬೇಕು. ಜೀವನದಲ್ಲಿ ಜ್ಞಾನ, ಶಿಸ್ತು, ತಾಳ್ಮೆಯಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಕಾನೂನು ಪದವಿ ಮುಗಿಸಿದರೆ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ ಎಂದರು.ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾದ ಎಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯಾಯವಾದಿ ಹಾಗೂ ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ.ಶೀಲ, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಎಂ.ಎಸ್. ಸುಧಾದೇವಿ, ಆಡಳಿತಾಧಿಕಾರಿ ಡಿ.ಎಚ್. ನಟರಾಜ್, ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್ ವೇದಿಕೆಯಲ್ಲಿದ್ದರು.
ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿ ಚೈತ್ರ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕ ಡಾ. ಎನ್.ಡಿ. ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಡಿ.ಬಿ. ವಂದಿಸಿದರು.