ಯುವಕರಿಗೆ ಅಮರಶಿಲ್ಪ ಜಕಣಾಚಾರಿ ಸ್ಪೂರ್ತಿ: ಕೆ.ಎಸ್. ಸಿದ್ದಲಿಂಗಪ್ಪ

| Published : Jan 02 2025, 12:32 AM IST

ಯುವಕರಿಗೆ ಅಮರಶಿಲ್ಪ ಜಕಣಾಚಾರಿ ಸ್ಪೂರ್ತಿ: ಕೆ.ಎಸ್. ಸಿದ್ದಲಿಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೈದಾಳವನ್ನು ಅಮರಶಿಲ್ಪಿ ಜಕಣಾಚಾರಿಗಳ ಪ್ರವಾಸಿ ತಾಣವಾಗಿಸಬೇಕು ಹಾಗೂ ನಾಡಿನ ಆಕರ್ಷಕ ಕೇಂದ್ರವಾಗಿಸಬೇಕು ಎಂಬ ಬೇಡಿಕೆ ಇದೆ.

ಕನ್ನಡಪ್ರಭ ವಾರ್ತೆ ತುಮಕೂರು

ಅಮರ ಶಿಲ್ಪಿ ಜಕಣಾಚಾರಿ ಅವರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವಿಶೇಷವಾದ ಕೌಶಲ್ಯವನ್ನು ತಮ್ಮ ಪ್ರತಿಭೆ ಮೂಲಕ ತೋರಿಸಿದ್ದಾರೆ. ಇಂದಿನ ಯುವ ಶಿಲ್ಪಿಗಳಿಗೆ ಅಮರಶಿಲ್ಪಿ ಜಕಣಾಚಾರಿ ಸ್ಫೂರ್ತಿಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಹೇಳಿದರು.

ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ವಿಶ್ವ ಕರ್ಮ ಸೇವಾ ಸಮಿತಿ ಸಹಯೋಗದಲ್ಲಿ ಅತ್ಯಂತ ಸರಳವಾಗಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಶಿಲ್ಪಿಗಳು ದೇಶದ ನಾಗರಿಕತೆಯ ರಾಯಭಾರಿಗಳು. ಶಿಲ್ಪಿಗಳು ಲೋಹದ ಜತೆ, ಮರಗಳ ಜತೆ, ಪ್ರಕೃತಿ ಜತೆ, ಭವಿಷ್ಯಕ್ಕೆ ಬೇಕಾಗಿರುವ ಕುರುಹುಗಳನ್ನು ಬಿಟ್ಟು ಹೋಗುವಂತಹ ಕೆಲಸ ಮಾಡಿ ಸಂಸ್ಕೃತಿ, ಕಲೆಯನ್ನು ಜೀವಂತವಾಗಿಡುವ ಕೆಲಸವನ್ನು ಮಾಡುತ್ತಾರೆ ಎಂದರು.

ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೈದಾಳವನ್ನು ಅಮರಶಿಲ್ಪಿ ಜಕಣಾಚಾರಿಗಳ ಪ್ರವಾಸಿ ತಾಣವಾಗಿಸಬೇಕು ಹಾಗೂ ನಾಡಿನ ಆಕರ್ಷಕ ಕೇಂದ್ರವಾಗಿಸಬೇಕು ಎಂಬ ಬೇಡಿಕೆ ಇದೆ. ಆದರೆ ಈ ಬೇಡಿಕೆ ಇದುವರೆಗೂ ಈಡೇರಿಲ್ಲ. 2025ರ ನೂತನ ವರ್ಷದಲ್ಲಾದರೂ ಈ ಕನಸು ನನಸಾಗಲಿ ಎಂದು ಆಶಿಸಿದರು.

ಶಿಲ್ಪಿಗಳ ಪ್ರತಿಭೆ ಜಗತ್ತಿಗೆ ಗೊತ್ತಾಗಬೇಕಾದರೆ ಕೌಶಲ್ಯ ಬಹಳ ಮುಖ್ಯ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯ ಜ್ಞಾನವನ್ನು ಯುವಕರಿಗೆ ಹೆಚ್ಚು ಹೆಚ್ಚು ಬೋಧನೆ ಮಾಡುವ ಮೂಲಕ ವಿದ್ಯಾವಂತರನ್ನಾಗಿಸಲು ಮುಂದಾಗಿದೆ. ಶಿಲ್ಪಿಗಳ ಶ್ರಮವನ್ನು, ಕೌಶಲ್ಯವನ್ನು ಗೌರವಿಸುವ ದಿನವನ್ನಾಗಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಆಚರಿಸೋಣ ಎಂದರು.

ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಕುಮಾರ್ ಆನಂದರಾಮ್ ಟಿ.ಎ. ಮಾತನಾಡಿ, ತುಮಕೂರಿನಲ್ಲಿ ಶಿಲ್ಪಕಲಾ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸಮುದಾಯದ ವೆಂಕಟೇಶಾಚಾರ್ ಎನ್. ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿ ಅಮರಶಿಲ್ಪಿ ಜಕಣಾಚಾರಿ ಇರುವುದೇ ನಮ್ಮ ಹೆಮ್ಮೆ. ಇತಿಹಾಸ ಪ್ರಸಿದ್ದ ದೇವಾಲಯಗಳಲ್ಲಿ ಅಮರಶಿಲ್ಪಿ ಜಕಣಾಚಾರಿಗಳಿಂದ ಕೆತ್ತನೆಯಾಗಿರುವ ಶಿಲ್ಪಕಲೆಗಳಿವೆ. ಜಕಣಾಚಾರಿಗಳ ಮಾರ್ಗದರ್ಶನವನ್ನು ಅ ನುಸರಿಸಿ ಇಂದಿನ ಯುವ ಸಮುದಾಯದವರು ಮರದಲ್ಲಿ ಕೆತ್ತನೆ ಸೇರಿದಂತೆ ಶಿಲ್ಪಕಲೆಗಳ ಕೆತ್ತನೆಯಲ್ಲೂ ತೊಡಗಿದ್ದಾರೆ. ಇವರಿಗೆಲ್ಲಾ ಅಮರಶಿಲ್ಪಿ ಜಕಣಾಚಾರಿಗಳೇ ಸ್ಫೂರ್ತಿ ಎಂದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಸುರೇಶ್‌ಕುಮಾರ್, ವಿಶ್ವಕರ್ಮ ನಿಗಮದ ಸದಸ್ಯ ಡಮರುಗೇಶ್, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿ ಆನಂದರಾಮ್ ಟಿ.ಎ., ಗೌರವಾಧ್ಯಕ್ಷ ಎನ್.ಎಸ್. ರವಿಕುಮಾರ್, ವೆಂಕಟೇಶಾಚಾರ್, ಚಂದ್ರಶೇಖರ್, ಹರೀಶಾಚಾರ್ಯ, ಟಿ.ವಿ. ಚೇತನ್‌ಕುಮಾರ್, ನವೀನಾಚಾರ್, ಟಿ.ಎಚ್. ನವೀನ್‌ಕುಮಾರ್, ಲಕ್ಷ್ಮೀಪತಿ, ಎಂ. ಕೃಷ್ಣ, ಜಗದೀಶ್, ಮಹೇಶ್, ರೋಹಿತ್, ಮಂಜುನಾಥ್, ಚಂದ್ರಶೇಖರ್, ಕೆ.ವಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.