ಅಂಬೇಡ್ಕರ್ ಜೀವನಾಧಾರಿತ ದಿ ರೂಲರ್ಸ್ ಚಿತ್ರ ತೆರೆಗೆ

| Published : Sep 01 2024, 01:50 AM IST / Updated: Sep 01 2024, 01:51 AM IST

ಸಾರಾಂಶ

ಡಾ. ಞಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಜೀವನದಾರಿದ ದಿ ರೂಲರ್ಸ್ ಚಿತ್ರ ತೆರೆಕಂಡ ಹಿನ್ನೆಲೆಯಲ್ಲಿ ನಗರದ ಪೃಥ್ವಿ ಚಿತ್ರಮಂದಿರದ ಆವರಣದಲ್ಲಿ ಚಿತ್ರತಂಡದಿಂದ ಸಂಭ್ರಮಾಚರಣೆ ನಡೆಸಿದರು. ಸಂವಿಧಾನದ ಶಕ್ತಿ ಎಂಬ ಶೀರ್ಷಿಕೆ ಅಡಿಯಲ್ಲಿ ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದ್ದು, ಅಂತಾರಾಷ್ಟ್ರೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಕೆಂ ಸಂದೇಶ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಮಾಡಿದ್ದು , ಉದಯ್ ಭಾಸ್ಕರ್‌ ಅವರು ನಿರ್ದೇಶಿಸಿ ಅಶ್ವತ್ಥ್‌ ಬೆಳಗೆರೆಯವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಜೀವನದಾರಿದ ದಿ ರೂಲರ್ಸ್ ಚಿತ್ರ ತೆರೆಕಂಡ ಹಿನ್ನೆಲೆಯಲ್ಲಿ ನಗರದ ಪೃಥ್ವಿ ಚಿತ್ರಮಂದಿರದ ಆವರಣದಲ್ಲಿ ಚಿತ್ರತಂಡದಿಂದ ಸಂಭ್ರಮಾಚರಣೆ ನಡೆಸಿದರು.

ಚಿತ್ರ ತೆರೆ ಕಾಣುವ ಮುನ್ನ ಚಿತ್ರ ತಂಡ ಪಟಾಕಿ ಸಿಡಿಸಿ ಸಂಭ್ರಮಿಸುವ ಜೊತೆಗೆ ಚಿತ್ರದ ಕಟೌಟ್‌ಗೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಅಂಬೇಡ್ಕರ್‌ ಸೇವಾ ಸಮಿತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ್‌ ಮಾತನಾಡಿ, ಸಂವಿಧಾನದ ಶಕ್ತಿ ಎಂಬ ಶೀರ್ಷಿಕೆ ಅಡಿಯಲ್ಲಿ ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದ್ದು, ಅಂತಾರಾಷ್ಟ್ರೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಕೆಂ ಸಂದೇಶ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಮಾಡಿದ್ದು , ಉದಯ್ ಭಾಸ್ಕರ್‌ ಅವರು ನಿರ್ದೇಶಿಸಿ ಅಶ್ವತ್ಥ್‌ ಬೆಳಗೆರೆಯವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಹಾಗೂ ದೇಶದ ಜನತೆಗೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದ್ದು, ಪ್ರತಿಯೊಬ್ಬರು ಜಾತ್ಯತೀತವಾಗಿ ಧರ್ಮಾತೀತವಾಗಿ ಹಾಗೂ ಪಕ್ಷಾತೀತವಾಗಿ ಕುಟುಂಬ ಸಮೇತರಾಗಿ ಈ ಚಿತ್ರವನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ವೈಚಾರಿಕ ಪತ್ರಿಕೆ ಸಂಪಾದಕರಾದ ಬ್ಯಾಕರವಳ್ಳಿ ವೆಂಕಟೇಶ್ ಮಾತನಾಡಿ, ಸಮಾಜಮುಖಿಯಾಗಿ ಹಾಗೂ ಅಂಬೇಡ್ಕರ್ ಅವರ ಜೀವನಾಧಾರಿತ ದಿ ರೂಲರ್ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಇಂದಿನಿಂದ ಹಾಸನದ ಪೃಥ್ವಿ ಚಿತ್ರಮಂದಿರದಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಪ್ರತಿದಿನ ಮೊದಲ ಶೋನಲ್ಲಿ ಚಿತ್ರವನ್ನು ವೀಕ್ಷಣೆಗೆ ಅವಕಾಶ ನೀಡಲಾಗಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳು ಅನುಯಾಯಿಗಳು ಹಾಗೂ ಸಮಾಜದ ಪ್ರತಿಯೊಬ್ಬರು ಈ ಚಿತ್ರವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೂ ಈ ಚಿತ್ರದಲ್ಲಿ ಉಪಯುಕ್ತ ಮಾಹಿತಿಗಳು ಲಭ್ಯವಿದ್ದು, ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ ತಿಳಿಯಲು ಚಿತ್ರ ಸಹಾಯಕವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದರು.

ಈ ವೇಳೆ ಅಂಬೇಡ್ಕರ್‌ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶಿವಕುಮಾರ್, ಮುಖಂಡರಾದ ಮಂಜುನಾಥ್, ರಘು, ಮಧು, ಶರತ್, ನವೀನ್ ಗಿಣಿಯಪ್ಪ,ಎಚ್.ಡಿ ಮಂಜುನಾಥ್‌ ಇತರರು ಇದ್ದರು.