ಸನಾತನ ಕಾಲದಿಂದಲೂ ಬಂದಿರುವ ಕಾಲಗಣನೆಯ ಶಾಸ್ತ್ರ ಮಾನವನ ಅಭ್ಯುದಯಕ್ಕೆ ಪೂರಕವಾದ ವೇದಾಂಗ. ಜ್ಯೋತಿಷ್ಯಶಾಸ್ತ್ರ ಕೆಲವೊಮ್ಮೆ ಜ್ಯೋತಿಷಿ ಸುಳ್ಳು ಹೇಳಬಹುದು. ಆದರೆ ಜ್ಯೋತಿಷ್ಯಶಾಸ್ತ್ರ ಸುಳ್ಳಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸನಾತನ ಕಾಲದಿಂದಲೂ ಬಂದಿರುವ ಕಾಲಗಣನೆಯ ಶಾಸ್ತ್ರ ಮಾನವನ ಅಭ್ಯುದಯಕ್ಕೆ ಪೂರಕವಾದ ವೇದಾಂಗ. ಜ್ಯೋತಿಷ್ಯಶಾಸ್ತ್ರ ಕೆಲವೊಮ್ಮೆ ಜ್ಯೋತಿಷಿ ಸುಳ್ಳು ಹೇಳಬಹುದು. ಆದರೆ ಜ್ಯೋತಿಷ್ಯಶಾಸ್ತ್ರ ಸುಳ್ಳಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.ನಗರದ ಗಣೇಶನಗರದಲ್ಲಿ ನಡೆದ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಧರ್ಮದ ಮೇಲೆ ಅನ್ಯ ಧರ್ಮಗಳ ಆಕ್ರಮಣ ನಡೆಯುತ್ತಿದೆ. ಹಿಂದೂಗಳ ಧರ್ಮ ನಂಬಿಕೆ, ಸಂಸ್ಕಾರ, ಶ್ರದ್ಧೆ ಕದಡುವ ಮೂಲಕ ಮತಾಂತರಗೊಳಿಸುವ ದೇಶ-ವಿದೇಶದ ಶಕ್ತಿಗಳು ಪ್ರಯತ್ನಿಸುತ್ತಲೇ ಇವೆ. ಅಂತವರ ಆಕ್ರಮಣಕ್ಕೆ ಮೊದಲು ಬಲಿಯಾಗುವುದು ಜ್ಯೋತಿಷಿಗಳು. ಜ್ಯೋತಿಷ್ಯದ ನಂಬಿಕೆಗಳನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜ್ಯೋತಿಷಿಗಳು ಒಗ್ಗಟ್ಟಾಗಿ ತಮ್ಮ ಜ್ಞಾನ ಪರಂಪರೆ ರಕ್ಷಿಸಬೇಕು ಎಂದು ಹೇಳಿದರು.
ನಿವೃತ್ತ ಡಿವೈಎಸ್ಪಿ ಬಸವರಾಜ ಚೌಕಿಮಠ ಮಾತನಾಡಿ, ಜ್ಯೋತಿಷಿಗಳು ತಮ್ಮಲ್ಲಿರುವ ಅಪರಿಮಿತ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ನಾಲ್ಕಾರು ಜನ ಶಿಷ್ಯರಿಗೆ ಕಲಿಸಿದರೆ ಜ್ಞಾನ ಪ್ರಸಾರವಾಗಲಿದೆ. ಒಕ್ಕೂಟ ಈ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದರು. ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಡಾ.ಆನಂದ ಹಂದಿಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ವಾನ್ ಗುರುರಾಜ ಆಚಾರ್ಯರಲ್ಲಿ ಕರ್ತೃತ್ವ ಶಕ್ತಿ ಇದೆ. ನೂತನ ಅಧ್ಯಕ್ಷರಾಗಿ ಆಚಾರ್ಯರು ಸಂಸ್ಥೆಯನ್ನು ಇನ್ನಷ್ಟು ಪ್ರಗತಿಪಥದಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.ಇದೇ ಸಂದರ್ಭದಲ್ಲಿ ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ಹಾಗೂ ನೂತನ ಉಪಾಧ್ಯಕ್ಷ ಭುಜಂಗಶರ್ಮಾ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಸುರೇಶ ಕೊಪ್ಪರ, ಶ್ರೀಕಾಂತ ಮಂಗಸುಳಿ, ನಾರಾಯಣ ಮಂಗಳೂರ, ರಮೇಶ ಬಡಂಕರ, ಶಿವಪುತ್ರಯ್ಯ ಹಿರೇಮಠ, ವೆಂಕಟೇಶ ಕುಲಕರ್ಣಿ ಮಾತನಾಡಿದರು. ಖ್ಯಾತ ಜ್ಯೋತಿಷಿಗಳಾದ ಉದಯ ಮುದ್ದೇಬಿಹಾಳ, ಎಸ್.ಆರ್. ಪಟ್ಟಣಶೆಟ್ಟಿ, ಗೋವಿಂದಭಟ್ಟ ಜೋಶಿ, ನೀಲಕಂಠಯ್ಯ ಹಿರೇಮಠ, ನಾರಾಯಣ ಘೋರ್ಪಡೆ, ಸಂಜೀವಭಟ್ಟ ಬಿಳಗಿ, ಕಲ್ಯಾಣ ಸಂಗಮ, ಅನೀಲ ಜೋಶಿ, ಗುರುಬಸಯ್ಯ ಶೀಲವಂತ ಸೇರಿ ಹಲವು ಜ್ಯೋತಿಷಿಗಳು ಉಪಸ್ಥಿತರಿದ್ದರು. ಅಚ್ಯುತ್ ಪುರೋಹಿತ ಸ್ವಾಗತಿಸಿದರು. ಮಹಾದೇವಿ ದೊಡಮನಿ ನಿರೂಪಿಸಿದರು. ಶ್ರೀಕಾಂತ ಆಚಾರ್ಯ ವಂದಿಸಿದರು.