ಸಾರಾಂಶ
ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರೆಯ ಮಿಠಾಯಿ ಅಂಗಡಿಗಳಲ್ಲಿ ಜಾಗೃತಿ ನುಡಿ, ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಅಳವಡಿಸಿದ್ದಾರೆ. ಈ ನುಡಿಗಳು ಜಾತ್ರಿಗರ ಗಮನ ಸೆಳೆಯುತ್ತಿವೆ.ಜಾತ್ರೆ ಸಾಮಾಜಿಕ, ವೈಚಾರಿಕ ಜಾಗೃತಿಗೆ ಮುನ್ನುಡಿ ಬರೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಾತ್ರೆಯಲ್ಲಿ ತಲೆ ಎತ್ತಿರುವ ಮಿಠಾಯಿ ಅಂಗಡಿಗಳ ಮಾಲೀಕರು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.ಜಾತ್ರೆಯಲ್ಲಿ ಮಿಠಾಯಿ ಅಂಗಡಿಗಳ ಮಾಲಕರು ಜಾಗೃತಿ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಿದ್ದಲ್ಲದೇ ಅಂಗಡಿಯಲ್ಲಿ ತಿಳಿವಳಿಕೆ ಮೂಡಿಸುವ ಫಲಕಗಳನ್ನು ಹಾಕಿಕೊಂಡಿದ್ದಾರೆ.ಸೌಹಾರ್ದ ಕಡೆ ನಮ್ಮ ನಡೆ, ಕಾಯಕ ದೇವೋಭವ ಜಾಗೃತಿ, ಜಿಲ್ಲೆಯ ಐತಿಹಾಸಿಕ ತಾಣಗಳ ಪರಿಚಯದ ಫಲಕ, ರಘುಪತಿ ರಾಜಾರಾಮ, ಸಬ್ಕೋಸಮ್ಮತಿ ಹೇ ಭಗವಾನ ಸಂದೇಶ ಹೀಗೆ ಸಾಮಾಜಿಕ ಕಳಕಳಿಯ ಅರ್ಥಗರ್ಭಿತ ಸಂದೇಶಗಳ ಫಲಕ ಅಳವಡಿಸಿದ್ದಾರೆ.ಮಠದಿಂದ ಪ್ರತಿ ವರ್ಷ ನಾನಾ ಸಾಮಾಜಿಕ ಜಾಗೃತಿ, ಪರಿವರ್ತನೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ವ್ಯಾಪಾರಿಗಳ ಮೇಲೂ ಪ್ರಭಾವ ಬೀರಿದಂತಿದೆ. ಜನರು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಸಂದೇಶ ಕಂಡು ತಾವೂ ಬದಲಾಗುತ್ತೇವೆ ಎನ್ನುವ ಶಪಥ ಮಾಡುತ್ತಿದ್ದಾರೆ.ಗವಿಶ್ರೀಗಳ ಸಾಮಾಜಿಕ ಕಳಕಳಿ ನಮ್ಮ ಮೇಲೆ ಪ್ರಭಾವ ಬೀರಿದೆ. ವ್ಯಾಪಾರದ ಜೊತೆಗೆ ಸಾಮಾಜಿಕ ಸಂದೇಶ ಕೊಡಬೇಕು ಎಂದು ಹಿತ ನುಡಿಗಳ ಅಳವಡಿಕೆ ಕಾರ್ಯ ಮಾಡಿದ್ದೇವೆ ಎನ್ನುತ್ತಾರೆ ಮಿಠಾಯಿ ಅಂಗಡಿಯ ಮಹ್ಮದರಫಿ ಬಿಜಾವರ.