ಸಾರಾಂಶ
ಕೂಡಲೆ ಸರ್ಕಾರ ಮತ್ತು ತಾಲೂಕು ಆಡಳಿತ ತಕ್ಷಣ ಇವರಿಗೆ ವಾಸಿಸಲು ಮನೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನ ಕೊಣಸೂರು ಗ್ರಾಮದ ತಮ್ಮಯ್ಯಪ್ಪ ಎಂಬವರಿಗೆ ಸೇರಿದ ಮನೆ ಭಾರಿ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇವರಿಗೆ ವಾಸಿಸಲು ಮನೆ ಇಲ್ಲದೆ ಕಂಗಾಲಾಗಿದ್ದಾರೆ, ಕೂಡಲೆ ಸರ್ಕಾರ ಮತ್ತು ತಾಲೂಕು ಆಡಳಿತ ತಕ್ಷಣ ಇವರಿಗೆ ವಾಸಿಸಲು ಮನೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಟ್ಟದತುಂಗಾ, ಚಪ್ಪರದಹಳ್ಳಿ, ಬೆಟ್ಟದಪುರ, ಹರದೂರು, ಗೊರಹಳ್ಳಿ ಸೇರಿದಂತೆ ತಾಲೂಕಿನ ಇನ್ನು ಹಲವಾರು ಗ್ರಾಮಗಳಲ್ಲಿ ಮನೆಗಳು ಬಿದ್ದಿದೆ.ಬೆಟ್ಟದಪುರ ನಾಡಕಚೇರಿ ಉಪ ತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಅಜ್ಮಲ್ ಷರೀಫ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಮಳೆಯಿಂದ ಹಾನಿಯಾದ ಸಾರ್ವಜನಿಕರಿಗೆ ಸರ್ಕಾರಕ್ಕೆ ವರದಿ ನೀಡಿ ಭಾರಿ ಮಳೆಯಿಂದ ನೊಂದ ಜನರಿಗೆ ಸಹಾಯ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾವೇರಿ ನದಿಯ ದಂಡೆಯಲ್ಲಿರುವ ಗ್ರಾಮಗಳಾದ ಆವರ್ತಿ, ದಿಂಡು ಗಾಡು, ಮುತ್ತಿನ ಮುಳ್ಸೋಗೆ, ದೊಡ್ಡ ಕಂಬರಹಳ್ಳಿ, ಶಾನುಭೋಗನಹಳ್ಳಿ, ಸೂಳೇ ಕೋಟೆ, ಕಣಗಾಲ್ ಗ್ರಾಮಗಳಲ್ಲಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರೈತರ ಬೆಳೆಗಳ ಹಾನಿ ಮಾಡಿದ್ದು, ಅಧಿಕಾರಿಗಳು ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ಕಣಗಾಲ್ ಗ್ರಾಪಂ ಮಾಜಿ ಅಧ್ಯಕ್ಷ ಕೆ. ಮಹದೇವ್, ಹನುಮಂತು, ಮಾಜಿ ಉಪಾಧ್ಯಕ್ಷ ಕುಮಾರ್ ಶೆಟ್ಟಿ, ಶ್ರೀನಿವಾಸ್, ಪುಟ್ಟರಾಜ ಒತ್ತಾಯಿಸಿದ್ದಾರೆ.