ಸ್ವಂತ ಮನೆ ಕಟ್ಟಿಕೊಳ್ಳುವ ವೃದ್ಧ ದಂಪತಿಯ ಕನಸು ನನಸು

| Published : Oct 05 2024, 01:34 AM IST

ಸಾರಾಂಶ

ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ವೃದ್ಧ ದಂಪತಿಗಳ ನಾಲ್ಕು ದಶಕದ ಕನಸನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಈಡೇರಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ವೃದ್ಧ ದಂಪತಿಗಳ ನಾಲ್ಕು ದಶಕದ ಕನಸನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಈಡೇರಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.

ತಾಲೂಕಿನ ಹಿಂಡಸಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಲಕ್ಷ್ಮಮ್ಮ ವೀರಭದ್ರಪ್ಪ ದಂಪತಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸಾಕಷ್ಟು ಜನೋಪಯೋಗಿ ಕಾರ್ಯಗಳಾಗಿದ್ದು, ಅವುಗಳ ಪೈಕಿ ವಾತ್ಸಲ್ಯ ಮನೆ ಯೋಜನೆಯು ಒಂದು. ವಯಸ್ಸಾದ, ಆಸರೆಯಿಲ್ಲದ ನಿರಾಶ್ರಿತ ವೃದ್ಧರಿಗೆ ಮನೆ ನಿರ್ಮಿಸಿಕೊಡುವ ಈ ಯೋಜನೆ ಮಾನವೀಯ ಸೇವೆಯಾಗಿದೆ ಎಂದು ಶ್ಲಾಘಿಸಿದರು.

ಫಲಾನುಭವಿ ಲಕ್ಷ್ಮಮ್ಮ ಮಾತನಾಡಿ, ನಾನು ಮದುವೆಯಾಗಿ ಬಂದಾಗಿನಿಂದಲೂ ಒಂದು ಸ್ವಂತ ಮನೆ ನಿರ್ಮಿಸಿಕೊಳ್ಳಬೇಕೆಂಬ ಕನಸು ಕನಸಾಗಿಯೇ ಉಳಿದಿತ್ತು. ಕೂಲಿ ಕೆಲಸ ಮಾಡಿದ ಹಣ ಜೀವನ ಮಾಡಲಿಕ್ಕೆ ಸಾಕಾಗುತ್ತಿರಲಿಲ್ಲ. ಮನೆಯ ಕಟ್ಟುವ ಕನಸು ಕನಸಾಗಿಯೇ ಇತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ವಾತ್ಸಲ್ಯ ಮನೆ ನಿರ್ಮಿಸಿಕೊಟ್ಟು, ನಮ್ಮ ಜೀವನದ ಬಹುದೊಡ್ಡ ಆಸೆಯೊಂದನ್ನು ನೆರವೇರಿಸಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ರತ್ನ, ವಿವಿ. ಪುರ ಯೋಜನಾ ಕಚೇರಿಯ ಯೋಜನಾಧಿಕಾರಿ ಅನಿಲ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನಿತಾ, ಬ್ಲಾಕ್ ಕಾಂಗ್ರೆಸ್ ಎಸ್ ಸಿ. ಸೆಲ್ ಅಧ್ಯಕ್ಷ ಜಿಎಲ್. ಮೂರ್ತಿ ಮುಂತಾದವರು ಹಾಜರಿದ್ದರು.