ಸಾರಾಂಶ
ನಿಡಗುಂದಿ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮೂರ್ತಿ ಲೋಕಾರ್ಪಣೆ ನಂತರ ಶ್ರೀರಾಮನ ದರ್ಶನಕ್ಕೆ ದೇಶಾದ್ಯಂತ ಭಕ್ತರು ವಿವಿಧ ಬಗೆಯಲ್ಲಿ ತೆರಳಿ ದರ್ಶನ ಪಡೆದಿದ್ದಾರೆ. ಆ ಭಕ್ತರ ಸಾಲಿನಲ್ಲಿ ಆಂಧ್ರ ಪ್ರದೇಶದ 70ರ ವೃದ್ಧನೊಬ್ಬ ಸೈಕಲ್ ಮೂಲಕ ಶ್ರೀರಾಮನ ದರ್ಶನಕ್ಕೆ ತೆರಳುತ್ತಿದ್ದಾನೆ.
ತಿರುಪತಿ ಬಳಿಯ ಗ್ರಾಮದ ರಂಗನಾಥ ಎಂಬ ವ್ಯಕ್ತಿಯ ಸೈಕಲ್ ಯಾತ್ರೆ ನಿಡಗುಂದಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಾಗುತ್ತಿದ್ದಾಗ ಮಾಧ್ಯಮದವರಿಗೆ ಸಿಕ್ಕಿದ್ದು, ಸೈಕಲ್ ಯಾತ್ರೆಯ ಮೂಲಕ ಪ್ರಭು ಶ್ರೀರಾಮನ ದರ್ಶನದ ಬಗ್ಗೆ ಹಂಚಿಕೊಂಡರು. ಕಳೆದ 15 ದಿನದಿಂದ ಆಂಧ್ರದ ತಿರುಪತಿ ಸಮೀಪದ ಗ್ರಾಮವೊಂದರಿಂದ ಸೈಕಲ್ ಯಾತ್ರೆ ಆರಂಭವಾಗಿದೆ. ಪ್ರತಿದಿನ 20 ಕಿಮೀ. ಸೈಕಲ್ ಯಾತ್ರೆ ನಡೆಸುತ್ತಾರೆ. ಸೈಕಲ್ ಮುಂದೆ ಶ್ರೀರಾಮನ ಭಾವಚಿತ್ರ ಹಾಗೂ ಶ್ರೀರಾಮನ ಪ್ರಚಾರ ಬಿತ್ತಿ ಪತ್ರ ಅಂಟಿಸಿಕೊಂಡು ತೆರಳುತ್ತಿದ್ದಾರೆ.
70ರ ಇಳಿ ವಯಸ್ಸಿನಲ್ಲೂ ಸೈಕಲ್ ಮೇಲ ಶ್ರೀರಾಮನ ದರ್ಶನ ಪಡೆಯುವ ಹಂಬಲ ಅವರ ಮಾತುಗಳಿಂದ ತಿಳಿಯಿತು. ಸೈಕಲ್ಗೆ ಕೇಸರಿ ಧ್ವಜ, ಕೊರಳಲ್ಲಿ ಕೇಸರಿ ಶಾಲು, ಪಂಚೆ ಧರಿಸಿದ ಅವರು, ತೆಲುಗು ಭಾಷೆ ಮಾತ್ರ ಮಾತನಾಡುತ್ತಾರೆ. ಶ್ರೀರಾಮನ ಸೇವೆಯೇ ನಮ್ಮ ಉಸಿರಾಗಿದೆ ಎಂದು ಶ್ರೀರಾಮನ ಭಕ್ತಿಯ ಹಂಬಲವನ್ನು ಪರಿಚಯಿಸಿದರು.
ಅಯೋದ್ಯೆಯಲ್ಲಿ ಶ್ರೀರಾಮನಮೂರ್ತೀ ಪ್ರತಿಷ್ಠಾಪನೆಯಾಗಿ ಹಲವು ತಿಂಗಳ ಕಳೆದರೂ ಶ್ರೀರಾಮನ ಭಕ್ತರು ಮಾತ್ರ ವಿಭಿನ್ನ ಸೇವೆಯ ಮೂಲಕ ತಮ್ಮ ಕನಸಿನ ರಾಮನನ್ನು ಭೇಟಿ ಮಾಡಲು ಹೋಗುತ್ತಿದ್ದಾರೆ. ತಮ್ಮ ಇಷ್ಟದ ಸೇವೆಯ ಮೂಲಕ ಪ್ರಭು ಶ್ರೀರಾಮನ ದರ್ಶನ ಪಡೆದು ಕೋರಿಕೆಗಳನ್ನು ಸಲ್ಲಿಸುತ್ತಿದ್ದಾರೆ.