ಎಂಇಎಸ್ ಪರ ಅಂಜಲಿ ಹೇಳಿಕೆ, ಮುಗಿಬಿದ್ದ ಬಿಜೆಪಿ

| Published : Apr 19 2024, 01:10 AM IST

ಎಂಇಎಸ್ ಪರ ಅಂಜಲಿ ಹೇಳಿಕೆ, ಮುಗಿಬಿದ್ದ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಅಂಜಲಿ ನಿಂಬಾಳ್ಕರ್ ಅವರು ಎಂಇಎಸ್‌ನ ಮತಬುಟ್ಟಿಗೆ ಕೈಹಾಕಲು ಹೀಗೆ ಹೇಳಿಕೆ ನೀಡಿದ್ದರೂ ಉತ್ತರಕನ್ನಡ ಜಿಲ್ಲೆಯಲ್ಲಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾರವಾರ: ಕಾರವಾರ, ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕೆಂಬ ಎಂಇಎಸ್ ಕೂಗಿನ ಪರವಾಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಹೇಳಿಕೆ ನೀಡಿರುವುದು ಹಾಗೂ ಪರೋಕ್ಷವಾಗಿ ರಾಜ್ಯ ವಿಭಜನೆ ಪರವಾಗಿ ಬ್ಯಾಟಿಂಗ್ ಮಾಡಿರುವುದು ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿಗೆ ಹೊಸ ಅಸ್ತ್ರ ದೊರಕಿಸಿಕೊಟ್ಟಂತಾಗಿದೆ.

ರಾಜ್ಯದ ಭೂಭಾಗ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಹೇಳಿಕೆ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಅಂಜಲಿ, ನಮ್ಮ ಸಂವಿಧಾನದಲ್ಲಿ ಹೋರಾಟ ಮಾಡಲು ಎಂಇಎಸ್‌ನವರಿಗೆ ಹಕ್ಕು ಇದೆ. ಅವರು ನ್ಯಾಯ ಕೇಳುತ್ತಿದ್ದಾರೆ. ಅವರು ಹೋರಾಟ ಮಾಡುತ್ತಿದ್ದಾರೆ. ಅನ್ಯಾಯ ಆದಲ್ಲಿ ಹೋರಾಟ ಮಾಡುವ ಹಕ್ಕು ಸಂವಿಧಾನದಲ್ಲೇ ಕೊಡಲಾಗಿದೆ ಎಂದೆಲ್ಲ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಡಾ. ಅಂಜಲಿ ನಿಂಬಾಳ್ಕರ್ ಅವರು ಎಂಇಎಸ್‌ನ ಮತಬುಟ್ಟಿಗೆ ಕೈಹಾಕಲು ಹೀಗೆ ಹೇಳಿಕೆ ನೀಡಿದ್ದರೂ ಉತ್ತರಕನ್ನಡ ಜಿಲ್ಲೆಯಲ್ಲಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಬಿಜೆಪಿ ಡಾ. ಅಂಜಲಿ ವಿರುದ್ಧ ಮುಗಿಬಿದ್ದಿದೆ.

ಕಿತ್ತೂರು, ಖಾನಾಪುರದ ಮತಗಳ ಮೇಲೆ ಕಣ್ಣಿಟ್ಟು ಡಾ. ಅಂಜಲಿ ನಿಂಬಾಳ್ಕರ್ ಅವರು ಈ ಹೇಳಿಕೆ ನೀಡಿದ್ದರೂ ಉತ್ತರ ಕನ್ನಡ ಜಿಲ್ಲೆಯ ಮತದಾರರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಗೇರಿ ಅವರು ಜಿಲ್ಲೆ ವಿಭಜನೆ ಬಗ್ಗೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಯತ್ನ ನಡೆಸಿದ್ದನ್ನು ಡಾ. ಅಂಜಲಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದರು. ಈ ಬಗ್ಗೆ ಕಾಗೇರಿ ಪ್ರತಿಕ್ರಿಯಿಸಿ ಜಿಲ್ಲೆ ವಿಭಜನೆ ಈಗ ಅಪ್ರಸ್ತುತ ಎಂದು ಹೇಳಿದ್ದರು. ಆದರೆ ಈಗ ಡಾ. ಅಂಜಲಿ ರಾಜ್ಯ ವಿಭಜಕರ ಪರವಾಗಿ ಮಾತನಾಡಿರುವುದು. ಪರೋಕ್ಷವಾಗಿ ರಾಜ್ಯ ವಿಭಜನೆಗೆ ಅಂಜಲಿ ಒಲವು ಹೊಂದಿದ್ದಾರೆಯೇ ಎಂಬ ಸಂದೇಹಗಳು ಏಳುವಂತೆ ಮಾಡಿವೆ. ಒಂದು ವೇಳೆ ಡಾ. ಅಂಜಲಿ ಗೆಲುವು ಸಾಧಿಸಿದಲ್ಲಿ ರಾಜ್ಯ ವಿಭಜಕರ ಧ್ವನಿಗೆ ಹೊಸ ನಾಯಕತ್ವ ಸಿಕ್ಕಂತಾಗಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಬಿಜೆಪಿ ವಕ್ತಾರ ಸದಾನಂದ ಭಟ್ ನಿಡುಗೋಡ ಈಗಾಗಲೆ ಡಾ. ಅಂಜಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಸವಾಲೆಸೆದಿದ್ದಾರೆ.

ಅಂಜಲಿ ನಿಂಬಾಳ್ಕರ್ ಅವರ ಹೇಳಿಕೆಯ ಪರವಾಗಿ ನಿಲ್ಲಲಾಗದೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಕಾರವಾರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಎಂಇಎಸ್ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿಕೆ ಮುಂದುವರಿಸುತ್ತಿದ್ದಾಗ ಇದರ ಗಂಭೀರತೆಯನ್ನು ಅರಿತ ಡಾ. ಆರ್.ವಿ. ದೇಶಪಾಂಡೆ ತಕ್ಷಣ ಮಧ್ಯಪ್ರವೇಶಿಸಿ ಮಹಾಜನ್ ವರದಿಯ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್‌ ಹೊಂಚು: ಅಂಜಲಿ ನಿಂಬಾಳ್ಕರ್ ಹೇಳಿಕೆ ಗಮನಿಸಿದರೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದು ಬೆಳಗಾವಿ, ಕಾರವಾರ, ಜೋಯಿಡಾ ಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಕಾಂಗ್ರೆಸ್ ಹೊಂಚು ಹಾಕಿದಂತಿದೆ ಎಂದು ಬಿಜೆಪಿಯ ವಿಶೇಷ ಆಹ್ವಾನಿತ ನಾಗರಾಜ ನಾಯಕ ತಿಳಿಸಿದರು.