ಅನ್ನಭಾಗ್ಯ ಅಕ್ಕಿ ದಾಸ್ತಾನಿಡುವ ಗೋದಾಮು ಸ್ಥಿತಿಗತಿ ವರದಿ ಸಲ್ಲಿಸಿ

| Published : Jun 27 2025, 12:48 AM IST / Updated: Jun 27 2025, 12:49 AM IST

ಅನ್ನಭಾಗ್ಯ ಅಕ್ಕಿ ದಾಸ್ತಾನಿಡುವ ಗೋದಾಮು ಸ್ಥಿತಿಗತಿ ವರದಿ ಸಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಶಿರಸಿ: ಅನ್ನಭಾಗ್ಯ ಅಕ್ಕಿ ದಾಸ್ತಾನಿಡುವ ಗೋದಾಮುಗಳ ಸ್ಥಿತಿಗತಿ ಕುರಿತ ಪರಿಶೀಲನಾ ವರದಿಯನ್ನು ಆಹಾರ ಇಲಾಖೆಯು ಗ್ಯಾರಂಟಿ ಸಮಿತಿಗೆ ಸಲ್ಲಿಸಬೇಕು ಎಂದು ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷೆ ಅಧ್ಯಕ್ಷೆ ಸುಮಾ ಉಗ್ರಾಣಕರ ಸೂಚಿಸಿದರು.

ಅವರು ನಗರದ ತಾಪಂನ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು. ತಿಂಗಳಿಗೆ ಎರಡು ಬಾರಿ ಸಮಿತಿ ಸಭೆ ನಡೆಸಲಾಗುತ್ತಿದೆ. ಗ್ಯಾರಂಟಿ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಆಯಾ ಇಲಾಖೆಗಳು ಜವಾಬ್ದಾರಿ ನಿಭಾಯಿಸಬೇಕು ಎಂದರು.

ಸದಸ್ಯ ಪ್ರಸನ್ನ ಶೆಟ್ಟಿ ಮಾತನಾಡಿ, ಅನ್ನ ಭಾಗ್ಯ ಯೋಜನೆಯಡಿ ಬಹುತೇಕ ಪಡಿತರ ಅಂಗಡಿಗಳಿಗೆ ಪೂರೈಕೆಯಾಗುವ ಅಕ್ಕಿ ಚೀಲಗಳು ಸೀಲ್ ಆಗಿರುವ ಬದಲು ಹೊಲಿಗೆ ಹಾಕಲ್ಪಟ್ಟಿವೆ. ಇಂತಹ ಅವ್ಯವಸ್ಥೆ ವಿರುದ್ಧ ಆಹಾರ ಇಲಾಖೆ ಗಂಭೀರ ಕ್ರಮ ವಹಿಸಬೇಕು. ಸರ್ಕಾರ ಉತ್ತಮ ಯೋಜನೆ ತಂದರೂ ಕೆಲ ಬಾರಿ ಸಾರ್ವಜನಿಕರಿಗೆ ಕಳಪೆ ಅಕ್ಕಿ ಕೈಸೇರುತ್ತಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಅಕ್ಕಿ ಸಂಗ್ರಹಿಸುವ ಗೋದಾಮಿನಿಂದ ಕೆಲ ಬಾರಿ ಬಾಯಿ ಹೊಲಿದ ಅಕ್ಕಿ ಚೀಲ ಪಡಿತರ ಅಂಗಡಿಗೆ ಬರುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಕ್ಕಿ ಸಂಗ್ರಹಿಸುವ ಗೋದಾಮುಗಳಿಗೆ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಹಾಗಾಗಿ ಗೋದಾಮುಗಳ ಪರಿಶೀಲನೆ ಕಾಲಕಾಲಕ್ಕೆ ಮಾಡಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಮಾಡಬೇಕು. ಇಂತಹ ಅವ್ಯವಸ್ಥೆಯ ವಿರುದ್ಧ ತಕ್ಷಣ ಸೂಕ್ತ ಕ್ರಮವಾಗದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಹಲವು ಜನರು ಆದಾಯ ತೆರಿಗೆ ಪಾವತಿದಾರ ಅಲ್ಲದಿದ್ದರೂ ಅಂತವರಿಗೆ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲಾಗುತ್ತಿಲ್ಲ. ನೋಂದಣಿಯಲ್ಲಿ ಸಮಸ್ಯೆ ಎದುರಿಸುತ್ತಿರುವವರ ಮನೆಗೆ ಇಲಾಖೆ ಅಧಿಕಾರಿಗಳು ಹೋಗುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯ ಬಡವರಿಗೆ ಕೈತಪ್ಪುತ್ತಿದೆ. ತಾಲೂಕಿನಲ್ಲಿ ತಾಂತ್ರಿಕ ಕಾರಣ ಮುಂದಿಟ್ಟು ೩೭೨ ಬಿಪಿಎಲ್ ಕಾರ್ಡ್‌ಗಳನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಿಡಿಪಿಒ ನಂದಕುಮಾರ ಎಂ.ಆರ್, ಎಲ್ಲಿ ನೋಂದಣಿ ಸಮಸ್ಯೆಯಾಗುತ್ತಿದೆ ಎಂಬುದರ ಬಗ್ಗೆ ಗಮನಕ್ಕೆ ತಂದರೆ ತಕ್ಷಣ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.

ಸಭೆಯಲ್ಲಿ ತಾಪಂ ಇಒ ಚನ್ನಬಸಪ್ಪ ಹಾವಣಗಿ, ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.