ಬೇಲೂರು: ಪ್ರತಿಯೊಂದು ಜಾತಿ ಆಧಾರಿತ ಸಮುದಾಯಕ್ಕೆ ತನ್ನದೇ ಆದ ಸಂಸ್ಕಾರ, ಸಂಸ್ಕೃತಿ ಹಾಗೂ ಪರಂಪರೆ ಇದ್ದು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡುವುದರ ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಸಮಾಜದ ಹುಟ್ಟಿನ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಹೇಳಿದರು. ತಾಲೂಕು ಅರೇಹಳ್ಳಿ ಹೋಬಳಿಯ ಗುಜ್ಜನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ರಾಣಿಯರ್‌ ಸಮಾಜ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿರಿಯರು ತಮ್ಮ ಮಕ್ಕಳಿಗೆ ಸಮಾಜ ಹುಟ್ಟಿದ ಇತಿಹಾಸದ ಬಗ್ಗೆ ತಿಳಿಹೇಳಬೇಕು. ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಸಹ ಸ್ವಾಭಿಮಾನದ ಬದುಕು ಸಾಗಿಸಿ, ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದರ ಮೂಲಕ ಸ್ವಯಂ ಏಳಿಗೆ ಹೊಂದಲು ಬದ್ಧರಾಗಬೇಕು ಎಂದರು. ರಾಣಿಯರ್ ಸಮಾಜದ ಜಿಲ್ಲಾಧ್ಯಕ್ಷ ಮೊನಪ್ಪ ಹೆಗ್ಗದ್ದೆ ಮಾತನಾಡಿ, ಜಿಲ್ಲೆಯ ರಾಣಿಯರ್ ಸಮಾಜದ ಸಂಘವು ನಾನಾ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ನಮ್ಮ ಸಮಾಜವು ಸಾಮಾಜಿಕ ಕೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ ಎಂದರು. ಈ ವೇಳೆ ಶಾಸಕ ಹುಲ್ಲಳ್ಳಿ ಸುರೇಶ್, ಅಖಿಲ ಕರ್ನಾಟಕ ರಾಣಿಯರ್ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ತನಿಯಪ್ಪ ರಾಣಿಯರ್, ಮಾಜಿ ಅಧ್ಯಕ್ಷ ಜಯಾರಣ್ಯ, ಗೌರವಾಧ್ಯಕ್ಷ ಪ್ರಕಾಶ್ ಎಂ.ಡಿ, ವಲಯ ಸಮಿತಿ ಅಧ್ಯಕ್ಷ ಮಹಾಬಲ ಕೆ., ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸತೀಶ್ ಎಂ, ಹಾಸನ ಜಿಲ್ಲಾ ಉಪಾಧ್ಯಕ್ಷ ಕೇಶವ, ಪ್ರಧಾನ ಕರ‍್ಯದರ್ಶಿ ಶಿವಣ್ಣ ಗುಜ್ಜನಹಳ್ಳಿ, ಸತೀಶ್ ಸುರತ್ಕಲ್, ಅಮಿತ್ ಶೆಟ್ಟಿ,ಶೇಖರ್, ಧನಂಜಯ್ ಅರಸ್, ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.