ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಮುಂದುರೆದಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ (31) ಮೃತಪಟ್ಟ ಬಾಣಂತಿ. ಹೆಣ್ಣು ಮಗು ಆರೋಗ್ಯವಾಗಿದೆ. ಆದರೆ, ಬಾಣಂತಿ ಸಾವಿನಿಂದಾಗಿ ಆಕೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾಗಿ 12 ವರ್ಷಗಳ ಬಳಿಕ ಹಿಂದೆ ನಿಂಗಾಣಿ ಜೊತೆಗೆ ಅಂಜಲಿ ವಿವಾಹವಾಗಿತ್ತು. ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಅಂಜಲಿ ಗರ್ಭವತಿಯಾಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಆದರೆ, ದುರದೃಷ್ಟವಶಾತ್ ಬಾಣಂತಿ ಅಸುನೀಗಿದ್ದಾಳೆ.ಮೊದಲು ವೈದ್ಯರು ಸಹಜ ಹೆರಿಗೆ ಆಗಲಿದೆ ಎಂದು ಹೇಳಿದ್ದರು. ಆಮೇಲೆ ಸಿಜೇರಿಯನ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡಿಲ್ಲ. ಹಾಗಾಗಿ, ಅಂಜಲಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ. ಆಸ್ಪತ್ರೆ ಮುಂದೆ ಅಂಜಲಿ ಕುಟುಂಬಸ್ಥರು ಜಮಾಯಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶವಾಗಾರದ ಮುಂದೆ ಕುಟುಂಬಸ್ಥರು ಪ್ರತಿಭಟನೆ ಮಾಡಿದರು.
ವೈದ್ಯರ ತಪ್ಪಿಲ್ಲ- ಡಾ.ವಸಂತ ಕಬ್ಬೂರ: ಬಿಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ.ವಸಂತ ಕಬ್ಬೂರ ಮಾತನಾಡಿ, ಸೋಮವಾರ ಸಂಜೆ ನಾಲ್ಕು ಗಂಟೆಗೆ ಅಂಜಲಿ ಪಾಟೀಲ ಒಪಿಡಿಗೆ ಬಂದಿದ್ದರು. ಜ.22ಕ್ಕೆ ಅಂಜಲಿ ಅವರಿಗೆ ಹೆರಿಗೆ ದಿನಾಂಕ ನೀಡಲಾಗಿತ್ತು. ಒಪಿಡಿಯಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಹಾರ್ಟ್ಬೀಟ್ ಕಡಿಮೆ ಆಗಿತ್ತು. ಆ ಕಾರಣಕ್ಕೆ ಸಿಜೇರಿಯನ್ ಮೂಲಕ ರಾತ್ರಿ 11.05ಕ್ಕೆ ಹೆರಿಗೆ ಮಾಡಿಸಲಾಗಿದೆ. ಬೆಳಗ್ಗೆ 5ಕ್ಕೆ ಅಂಜಲಿ ಮೃತಪಟ್ಟಿದ್ದಾರೆ. ರಕ್ತ ಹೆಪ್ಪುಗಟ್ಟಿ ಹಾಗೂ ಉಸಿರಾಟದ ಸಮಸ್ಯೆ ಆಗಿದೆ. ಅಂಜಲಿ ಸಾವಿಗೆ ಆಮ್ನಿಯೊಟೆಕ್ ಫ್ಲೂಯಿಡ್ ಎಂಬಾಲೀಸ್ ಕಾರಣ ಎಂಬುದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.ಬಿಮ್ಸ್ ನಿರ್ದೇಶಕ ಡಾ. ಅಶೋಕಕುಮಾರ ಶೆಟ್ಟಿ ಮಾತನಾಡಿ, ಘಟನೆಯಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿಲ್ಲ. ಪ್ರತಿವರ್ಷ ಸುಮಾರು 10 ಸಾವಿರ ಹೆರಿಗೆ ಆಗುತ್ತವೆ. ಅದರಲ್ಲಿ 6 ಸಾವಿರ ಹೈ ರಿಸ್ಕ್ ಸಿಜೇರಿಯನ್ ಆಗುತ್ತವೆ. ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾದ ಗರ್ಭಿಣಿಯರು ಕೊನೆಯ ಗಳಿಗೆಯಲ್ಲಿ ಗಂಭೀರ ಸ್ಥಿತಿಯಲ್ಲಿ ನಮ್ಮಲ್ಲಿಗೆ ಬರುತ್ತಾರೆ. ಹಾಗಾಗಿ, ಹಿರಿಯ ವೈದ್ಯರು ಆ ಬಾಣಂತಿ ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ಅದು ಸಫಲವಾಗಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸಾವಿನ ಪ್ರಕರಣ ಕಡಿಮೆ ಇವೆ ಎಂದು ತಿಳಿಸಿದರು.
ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಗ ಆಕೆಯನ್ನು ಪರಿಶೀಲಿಸಿದಾಗ ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಗೊತ್ತಾಗಿದೆ. ತಕ್ಷಣವೇ ಸಿಜೇರಿಯನ್ ಮಾಡಲು ಆಪರೇಷನ್ ಥಿಯೇಟರ್ಗೆ ಕರೆದೊಯ್ಯಲಾಗಿದೆ. ಆಗ ದಿಢೀರ್ ಅಂಜಲಿ ಪಾಟೀಲ್ಗೆ ಪಿಟ್ಸ್ (ಮೂರ್ಛೆರೋಗ) ಕಾಣಿಸಿಕೊಂಡು ರಕ್ತದೊತ್ತಡ ಕಡಿಮೆಯಾಗಿದೆ. ಇನ್ನು ಆಮ್ನಿಯೊಟಿಕ್ ಫ್ಲ್ಯೂಡ್ ಓಪನ್ ಆದಾಗ ಸ್ವಲ್ಪ ವಾಸನೆ ಬರುತ್ತಿತ್ತು. ಆಗ ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸಂ ಆಗಿರಬಹುದು ಎಂದು ಶಂಕಿಸಲಾಗಿದೆ. ಇದರಲ್ಲಿ ಯಾರಾದ್ರೂ ತಪ್ಪು ಕಂಡುಬಂದರೆ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.