ಸಾರಾಂಶ
ಮಳೆ ಕೊರತೆಯಿಂದ ಎಲ್ಲವೂ ದುಬಾರಿಯಾಗಿದ್ದರೂ ದೀಪಾವಳಿಯ ಅದ್ಧೂರಿತನಕ್ಕೇನೂ ಕಡಿಮೆಯಾಗಿಲ್ಲದ್ದೂ ಭಾನುವಾರ ಮಾರುಕಟ್ಟೆಯಲ್ಲಿನ ಅಬ್ಬರ, ಗಲಾಟೆ, ಕೊಡುಕೊಳ್ಳುವಿಕೆಯನ್ನೂ ನೋಡಿದರೆ ಅರ್ಥವಾಗುತ್ತದೆ. ಸಮೂಹ ಬೆಳಕಿನ ಹಬ್ಬ ದೀಪಾವಳಿಗೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ ಸೇರಿದಂತೆ ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಪಟ್ಟಣದ ಮಳಿಗೆಗಳು ಹಾಗೂ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದರು.
ಕನ್ನಡಪ್ರಭ ವಾರ್ತೆ ಕಾರಟಗಿ
ಈ ಬಾರಿ ನೀರು, ಮಳೆ ಕೊರತೆಯೊಂದಿಗೆ ಭತ್ತದ ಕಣಜ ಕಾರಟಗಿಯಲ್ಲಿ ರೈತ, ವರ್ತಕ, ಅಕ್ಕಿ ಉದ್ಯಮ ಭತ್ತದ ಬೆಳೆ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ದೀಪಾವಳಿ ಹಬ್ಬ ಆಚರಿಸಲು ಅಣಿಯಾಗಿದೆ.ವಾಣಿಜ್ಯ ಪಟ್ಟಣದಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಶ್ರೀಮಂತವಾಗಿ ಎಲ್ಲರೂ ಆಚರಿಸುತ್ತಾರೆ. ಲಕ್ಷ್ಮೀಯ ನೆಲೆಯ ಭೂಮಿ ಎಂದು ಹೆಸರಾದ ಭತ್ತದ ಕಣಜದಲ್ಲಿ ದೀಪಾವಳಿಯ ಸಿಂಗಾವರನ್ನೂ ನೋಡಲು ದೂರದೂರಿನಿಂದ ಬರುತ್ತಾರೆ. ಬರ ಮತ್ತು ದುಬಾರಿ ಸಮಸ್ಯೆ ಎದುರಿಸುವ ಮೂಲಕ ಈ ಬಾರಿ ದೀಪಾವಳಿಗೆ ಅದ್ಧೂರಿತನಕ್ಕೇನೂ ಕಡಿಮೆಯಾಗಿಲ್ಲ.ಮಳೆ ಕೊರತೆಯಿಂದ ಎಲ್ಲವೂ ದುಬಾರಿಯಾಗಿದ್ದರೂ ದೀಪಾವಳಿಯ ಅದ್ಧೂರಿತನಕ್ಕೇನೂ ಕಡಿಮೆಯಾಗಿಲ್ಲದ್ದೂ ಭಾನುವಾರ ಮಾರುಕಟ್ಟೆಯಲ್ಲಿನ ಅಬ್ಬರ, ಗಲಾಟೆ, ಕೊಡುಕೊಳ್ಳುವಿಕೆಯನ್ನೂ ನೋಡಿದರೆ ಅರ್ಥವಾಗುತ್ತದೆ. ಸಮೂಹ ಬೆಳಕಿನ ಹಬ್ಬ ದೀಪಾವಳಿಗೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ ಸೇರಿದಂತೆ ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಪಟ್ಟಣದ ಮಳಿಗೆಗಳು ಹಾಗೂ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದರು.ಇಲ್ಲಿನ ಸಂತೆ ಮಾರ್ಕೆಟ್, ಹಳೆ ಬಸ್ ನಿಲ್ದಾಣ, ನವಲಿ ವೃತ್ತ ವಿಶೇಷ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿಯಿಂದ ಕೂಡಿದ್ದವು. ಮಾರುಕಟ್ಟೆಗಳಲ್ಲಿ ಮಣ್ಣಿನ ಹಣತೆಗಳನ್ನು ರಸ್ತೆ ಬದಿಗಳಲ್ಲೇ ರಾಶಿ ಹಾಕಲಾಗಿದೆ. ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿದ್ದವು. ಲಕ್ಷ್ಮೀ ಮತ್ತು ಸರಸ್ವತಿ ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿ ಖರೀದಿ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟ ಭರ್ಜೆರಿಯಾಗಿತ್ತು.ಕ್ಷಣದಿಂದ ಕ್ಷಣಕ್ಕೆ ಹೂವಿನ ದರಗಳು ಏರಿಕೆ ಯಾಗುತ್ತಿದ್ದವು. ಆದರೂ ಜನ ದೀಪಾವಳಿ ಸಂಭ್ರಮದಲ್ಲಿ ಮುಗಿಬಿದ್ದು ಖರೀದಿ ಮಾಡಿದರು. ದೀಪಾವಳಿಗೆ ಅತಿಹೆಚ್ಚು ಸೇವಂತಿಗೆ, ಚೆಂಡು ಹೂ ಬೇಡಿಕೆ ಇತ್ತು. ಹೂಗಳ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ಉಳಿದ ಹೂಗಳ ದರ ಎಂದಿನಂತೆ ಸ್ವಲ್ಪ ಹೆಚ್ಚಾಗಿದೆ. ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಪೂಜೆಯ ವೇಳೆ ನೋಮುದಾರ, ಅರಿಶಿಣ-ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ, ಪೂಜಾ ಸಾಮಗ್ರಿಗಳ ಮಳಿಗೆಗಳ ಬಳಿಯೂ ಜನರ ದಂಡು ಬೀಡುಬಿಟ್ಟಿತ್ತು.ಇಲ್ಲಿನ ದಲಾಲಿ ವರ್ತಕರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಮತ್ತು ಸರಸ್ವತಿ ಪೂಜೆ ಮಾಡುತ್ತಾರೆ. ಈ ಬಾರಿ ಒಟ್ಟು ನಾಲ್ಕು ದಿನ ಹಬ್ಬದ ಮುಹೂರ್ತ ಇದ್ದು, ಭಾನುವಾರ ಸಂಜೆ ಇರುವ ಅಮೃತ ಘಳಿಕೆಯಲ್ಲಿ ಲಕ್ಷ್ಮೀ ಸರಸ್ವತಿ ಪೂಜೆ ಪ್ರತಿಷ್ಠಾಪನೆ ನಡೆಯುತ್ತಿದ್ದು, ನ.೧೪ರಂದು ಸೂರ್ಯಾಸ್ತದ ನಂತರ ಉತ್ತರ ಪೂಜೆ ನಡೆಯುತ್ತದೆ. ಅಲ್ಲಿಗೆ ಸೋಮವಾರದಿಂದ ಬುಧವಾರದವರೂ ಎಲ್ಲೆಡೆ ದೀಪಾವಳಿ ಹಬ್ಬದ ಸಡಗರ.