ಸಾರಾಂಶ
ಕೆಆರ್ ಎಸ್ ಡ್ಯಾಂ ಇದ್ದರೂ ಸಹ ಚಿನಕುರಳಿ ಹೋಬಳಿ ಜನರು ಬೇಸಾಯ ಮಾಡಲು ನೀರಿನ ಸಮಸ್ಯೆ ಎದುರಾಗಿದೆ. ಈ ಭಾಗದ ಹೇಮಾವತಿ ವಿತರಣೆ ನಾಲೆಗಳು ಅಧ್ವಾನಗೊಂಡಿವೆ. ಸಂಬಂಧಿಸಿದ ಅಧಿಕಾರಿಗಳು ನಾಲೆಗಳನ್ನು ಆಧುನೀಕರಣಗೊಳಿಸಿ ರೈತರ ಬೇಸಾಯಕ್ಕೆ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪಾಂಡವಪುರ: ತಾಲೂಕಿನ ಅಂತನಹಳ್ಳಿಯಲ್ಲಿ ಕಳೆದ 80 ವರ್ಷಗಳಿಂದ ಉಳುಮೆ ಮಾಡಿಕೊಂಡು ಅನುಭವದಲ್ಲಿ ಇರುವ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮದ ನಿವಾಸಿ ಮಂಜುನಾಥ್ ಪಟ್ಟಣದ ತಾಲೂಕು ಕಚೇರಿ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಏಕಾಂಗಿ ಪ್ರತಿಭಟನೆ ಆರಂಭಿಸಿದರು.
ಗ್ರಾಮದ ಸರ್ವೇ ನಂ. 111ರ ಸರಕಾರಿ ಜಮೀನಿನಲ್ಲಿ ನಮ್ಮ ತಾತ, ತಂದೆ ಅವರ ಕಾಲದಿಂದಲೂ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದು, ಅನುಭವದಲ್ಲಿ ಇರುವ ಜಮೀನನ್ನು ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅನೇಕ ಬಾರಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಅನೇಕರಿಗೆ ಮನವಿ ನೀಡಿದರೂ ಸಹ ಈವರೆಗೂ ಖಾತೆ ಮಾಡಿಕೊಡುತ್ತಿಲ್ಲ ಎಂದು ದೂರಿದರು.ನಮಗೆ ಇರುವುದು ಇದೊಂದೇ ಜಮೀನು. ಭೂಮಿ ಖಾತೆ ಮಾಡಿಕೊಡದ ಹಿನ್ನೆಲೆಯಲ್ಲಿ ನಮಗೆ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ಜಮೀನು ಖಾತೆ ಮಾಡಿಕೊಡಬೇಕು. ಸಂಬಂಧಿಸಿದ ಅಧಿಕಾರಿಗಳು ನನ್ನ ಮನವಿ ಪುರಸ್ಕರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಈ ಬಗ್ಗೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೂ ಮನವಿ ನೀಡಿದ್ದೇನೆ. ಶಾಸಕರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ರೈತರ ಯಾವುದೇ ಸಮಸ್ಯೆಗಳಿಗೂ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.ಕೆಆರ್ ಎಸ್ ಡ್ಯಾಂ ಇದ್ದರೂ ಸಹ ಚಿನಕುರಳಿ ಹೋಬಳಿ ಜನರು ಬೇಸಾಯ ಮಾಡಲು ನೀರಿನ ಸಮಸ್ಯೆ ಎದುರಾಗಿದೆ. ಈ ಭಾಗದ ಹೇಮಾವತಿ ವಿತರಣೆ ನಾಲೆಗಳು ಅಧ್ವಾನಗೊಂಡಿವೆ. ಸಂಬಂಧಿಸಿದ ಅಧಿಕಾರಿಗಳು ನಾಲೆಗಳನ್ನು ಆಧುನೀಕರಣಗೊಳಿಸಿ ರೈತರ ಬೇಸಾಯಕ್ಕೆ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅಂತನಹಳ್ಳಿ ಸರಕಾರ ಶಾಲೆ ದುರಸ್ಥಿಗೊಂಡ ಕಟ್ಟಡವನ್ನು ನೆಲಸಮ ಮಾಡಲಾಗಿದೆ, ಆದರೆ, ಈವರೆಗೂ ಕಟ್ಟಡ ನಿರ್ಮಿಸಿಲ್ಲ. ಇದರಿಂದ ಮಕ್ಕಳಿಗೆ ಅನಾನೂಕೂಲ ಉಂಟಾಗಿದೆ ಎಂದು ದೂರಿದರು.