ಸಾರಾಂಶ
ಅಲ್ಪಸಂಖ್ಯಾತರಿಗೆ ನೋವಾದಾಗ ತಕ್ಷಣ ಸ್ಪಂದಿಸಿ ಗರಿಷ್ಠ ಪರಿಹಾರ ಘೋಷಿಸುವ ಮುಖ್ಯಮಂತ್ರಿ, ಗೃಹ ಸಚಿವರು ನಾಗಮಂಗಲದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಯ ಹಿಂದು ಸಂತ್ರಸ್ತರನ್ನು ಮಾತ್ರ ನಾಲ್ಕು ದಿನಗಳಾದರೂ ಭೇಟಿಯಾಗಿಲ್ಲ ಎಂದು ಎಸ್.ದತ್ತಾತ್ರಿ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಅಲ್ಪಸಂಖ್ಯಾತರ ಹಬ್ಬಗಳಿಗೆ ಯಾವುದೇ ಕಟ್ಟುಪಾಡಗಳಿಲ್ಲ, ಅವರ ಹಬ್ಬಗಳಂದೂ ಸಾವಿರಾರು ಪೊಲೀಸರಿಂದ ರಕ್ಷಣೆ ನೀಡಲಾಗುತ್ತಿದೆ. ಆದರೆ ಹಿಂದುಗಳ ಹಬ್ಬದಂದು ಕಟ್ಟುಪಾಡುಗಳ ದೊಡ್ಡ ಪಟ್ಟಿಯನ್ನೇ ನೀಡಲಾಗುತ್ತದೆ, ಪೊಲೀಸರ ರಕ್ಷಣೆಯೂ ಇಲ್ಲ. ಅದರ ಮೇಲೆ ಹಬ್ಬ ಆಚರಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಹಿಂದು ಪರ ನಿಲುವು ತಾಳಿದರೆ ಅಲ್ಪಸಂಖ್ಯಾತರ ಓಟು ಕೈತಪ್ಪುವ ಭೀತಿಯಿಂದ ಸರ್ಕಾರ ಹೀಗೆ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ ಆರೋಪಿಸಿದ್ದಾರೆ.ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಅಲ್ಪಸಂಖ್ಯಾತರಿಗೆ ನೋವಾದಾಗ ತಕ್ಷಣ ಸ್ಪಂದಿಸಿ ಗರಿಷ್ಠ ಪರಿಹಾರ ಘೋಷಿಸುವ ಮುಖ್ಯಮಂತ್ರಿ, ಗೃಹ ಸಚಿವರು ನಾಗಮಂಗಲದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಗಲಭೆಯ ಹಿಂದು ಸಂತ್ರಸ್ತರನ್ನು ಮಾತ್ರ ನಾಲ್ಕು ದಿನಗಳಾದರೂ ಭೇಟಿಯಾಗಿಲ್ಲ. ಭೇಟಿ ನೀಡಿದರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂದು ಸರ್ಕಾರಕ್ಕೆ ಹೆದರಿಕೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರತಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಆಂತರಿಕ ವಿಷಯಗಳೇನಿದ್ದರೂ ದೇಶದಲ್ಲಿಯೇ ಹೇಳುವುದು ಅವರ ಕರ್ತವ್ಯವಾಗಿದೆ. ಆದರೆ ಅವರು ವಿದೇಶಕ್ಕೆ ಹೋಗಿ ಮೀಸಲಾತಿ ರದ್ದತಿ, ಜಮ್ಮು ಕಾಶ್ಮೀರದ ವಿಷಯ, ಸಿಖ್ಖರ ಧಾರ್ಮಿಕ ವಿಷ್ಯ ಇತ್ಯಾದಿಗಳ ಬಗ್ಗೆ ಮಾತನಾಡಿರುವುದು, ದೇಶದ ಅಖಂಡತೆ, ಏಕತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಜಿ.ಪ್ರ.ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ ದಿಲ್ಲೇಶ್ ಶೆಟ್ಟಿ, ಸಹಸಂಚಾಲಕ ಶಂಕರ ಅಂಕದಕಟ್ಟೆ ಉಪಸ್ಥಿತರಿದ್ದರು.