ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ ಎಂದು ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.ಗುಡಿಗೆರೆ ಗ್ರಾಮದಲ್ಲಿ ಶ್ರೀಸೋಮೇಶ್ವ ದೇವಾಲಯದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದಲ್ಲಿ ಇರುವ ಸಮಸ್ಯೆ ಬಗೆಹರಿಸಲು ನನ್ನ ಕೈಲಾದ ಮಟ್ಟಿಗೆ ಶ್ರಮಿಸುತ್ತೇನೆ ಎಂದರು.
ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ದ್ವೇಷ ಬೇಡ. ನಾನು ಪ್ರತಿ ಗ್ರಾಮಗಳಿಗೂ ತೆರಳಿದಾಗ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸುತ್ತಿದ್ದಾರೆ. ಕ್ಷೇತ್ರದ ಜನರ ಸೇವೆಗೆ ನಾನು ಸದಾ ಸಿದ್ಧನಿರುತ್ತೇನೆ ಎಂದರು.ನನ್ನ ಶಾಸಕತ್ವ ಅವಧಿ ಇನ್ನೂ 5 ವರ್ಷಗಳ ಕಾಲ ಇರುತ್ತದೆ. ನನ್ನ ಕೈಲಾದ ಮಟ್ಟಿಗೆ ಅಭಿವೃದ್ದಿ ಕೆಲಸವನ್ನು ಮಾಡುತ್ತೇನೆ. ಈಗಾಗಲೇ ಈ ಗ್ರಾಮದ ಸಮುದಾಯ ಭವನಕ್ಕೆ 4 ಲಕ್ಷ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಅನುದಾನವನ್ನು ನೀಡುತ್ತೇನೆಂದು ಭರವಸೆ ನೀಡಿದರು.ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಪಂ, ತಾಪಂ ಹಾಗೂ ತಾಲೂಕು ಆಡಳಿತ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಯಲ್ಲೂ ಸಾರ್ವಜನಿಕರ ಕೆಲಸ ಕಾರ್ಯಗಳಾಗಲು ನೇರವಾಗಿ ನನ್ನನ್ನು ಭೇಟಿ ಮಾಡಬೇಕು. ಒಂದು ನಿಮ್ಮ ಕೆಲಸವನ್ನು ಮಾಡಿಕೊಡದೆ ಶತಾಯಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ನನ್ನ ಅನುದಾನದಲ್ಲಿ ಆರ್ಥಿಕ ನೆರವು ನೀಡುವ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ಪರಿಷತ್ ಸದಸ್ಯನಾಗಿರುವುದರಿಂದ ಅನುದಾನಗಳು ಬಹಳಷ್ಟು ಕಡಿಮೆ ಇದೆ. ಆದರೂ ಸಹ ಗ್ರಾಮಗಳ ಅಭಿವೃದ್ಧಿಗೆ ನನ್ನ ಶಕ್ತಿಮೀರಿ ಕಾರ್ಯಗಳನ್ನು ಮಾಡುತ್ತೇನೆ ಎಂದರು.ಇದೇ ವೇಳೆ ಶ್ರೀಸೋಮೇಶ್ವರ ಸಮುದಾಯ ಭವನ ಟ್ರಸ್ಟ್ನಿಂದ ಶಾಸಕ ಮಧು ಜಿ.ಮಾದೇಗೌಡರನ್ನು ಅಭಿನಂದಿಸಲಾಯಿತು. ಟ್ರಸ್ಟ್ನ ಅಧ್ಯಕ್ಷ ರಾಮು, ನಾಡಗೌಡ ಬೊಮ್ಮೇಗೌಡ, ಉಪಾಧ್ಯಕ್ಷ ಪುಟ್ಟಲಿಂಗ, ಖಜಾಂಚಿ ಶಿವಪ್ರಸಾದ್, ಕಾರ್ಯದರ್ಶಿ ಜಿ.ಕೆ.ವೆಂಕಟೇಶ್, ಗ್ರಾ.ಪಂ ಸದಸ್ಯರಾದ ಮಿಥುನ್, ಮಂಜುನಾಥ್, ಸಿದ್ದೇಗೌಡ, ಕರೀಗೌಡ, ತಿಮ್ಮೇಗೌಡ, ನಾಗರಾಜು ಸೇರಿದಂತೆ ಹಲವರಿದ್ದರು.