Appeal to CM demanding rejection of Kasturirangan report
-ರಾಜ್ಯ ರೈತ ಸಂಘ, ತಾಲೂಕು ಸಂಯುಕ್ತ ರೈತ ಸಂಘದಿಂದ ಎಸಿಗೆ ಮನವಿ ಸಲ್ಲಿಕೆ
--ಕನ್ನಡಪ್ರಭ ವಾರ್ತೆ ಸಾಗರ
ಕಸ್ತೂರಿ ರಂಗನ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಹಾಗೂ ಚಾಮರಾಜನಗರದಲ್ಲಿ ರೈತರ ಮೇಲೆ ಅರಣ್ಯ ಸಿಬ್ಬಂದಿ ನಡೆಸಿದ ಎನ್ಕೌಂಟರ್ ಕುರಿತು ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ಅತಿಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ತಾಲೂಕು ಸಂಯುಕ್ತ ರೈತ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್ ಪರಿಷ್ಕೃತ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು.
ವರದಿಯಲ್ಲಿ ಶಿವಮೊಗ್ಗ ಜಿಲ್ಲೆಯ ೪೪೬ ಜನವಸತಿಯುಳ್ಳ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಸೇರ್ಪಡೆಗೊಳಿಸಿರುವುದು ಅವೈಜ್ಞಾನಿಕವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶವೆಂದು ಸೇರಿಸಿದ್ದು, ಮಲೆನಾಡು, ಉತ್ತರ ಕನ್ನಡ ಜಿಲ್ಲೆಯ ಜನರು ಆತಂಕದಲ್ಲಿ ಇರುವಂತಾಗಿದೆ. ವರದಿ ಜಾರಿಯಾದರೆ ಲಾಗಾಯ್ತಿನಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಒಕ್ಕಲೇಳಬೇಕಾಗುತ್ತದೆ. ಸರ್ಕಾರ ತಕ್ಷಣ ವರದಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ ಕುಮಾರ್, ಸಂಯುಕ್ತ ರೈತ ಸಂಘದ ಗೌರವಾಧ್ಯಕ್ಷ ಜಿನೇಶ್ ಕುಮಾರ್, ಅಧ್ಯಕ್ಷ ಹೊಯ್ಸಳ ಗಣಪತಿಯಪ್ಪ, ಎಂ.ಬಿ. ಮಂಜಪ್ಪ, ಸುಂದರ ಸಿಂಗ್, ಪ್ರಮುಖರಾದ ರಾಮಪ್ಪ ಶಿರವಾಳ, ಎಚ್.ಬಿ. ರಾಘವೇಂದ್ರ, ಮಂಜು ವಡ್ನಾಲ, ದೇವು ಆಲಳ್ಳಿ, ರಮೇಶ್ ಐಗಿನಬೈಲು, ಬೇಬಿ ಗೋಳಗೋಡು, ಸತೀಶ್ ಅಂಗಡಿ ಇದ್ದರು.
ಫೋಟೊ:೧೮ಕೆ.ಎಸ್.ಎ.ಜಿ.೨ಅರಣ್ಯ ಸಿಬ್ಬಂದಿ ನಡೆಸಿದ ಎನ್ಕೌಂಟರ್ ಕುರಿತು ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ತಾಲೂಕು ಸಂಯುಕ್ತ ರೈತ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.