ಕನ್ನಡಪ್ರಭ ವಾರ್ತೆ ಗುಬ್ಬಿ

ಹೇಮಾವತಿ ಎಕ್ಸ್‌ ಪ್ರೆಸ್‌ ಲಿಂಕ್ ಕೆನಾಲ್ ಯೋಜನೆಗೆ ಯಾವುದೇ ಕಾರಣಕ್ಕೂ ಕೆಲಸವನ್ನು ಪುನಃ ಪ್ರಾರಂಭಿಸಬಾರದೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.ತಾಲೂಕಿನ ಮಧನಘಟ್ಟ, ಸಾರಿಗೆಪಾಳ್ಯ ಗೇಟ್ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಅಂದಾಜು ರು.5 ಕೋಟಿ ವೆಚ್ಚದ ಸಿ.ಸಿ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ಹೇಮಾವತಿ ನೀರು ಗೊರೂರು ಜಲಾಶಯದಿಂದ ಈ ಭಾಗಕ್ಕೆ ಹರಿಯಲಿದ್ದು ಇನ್ನೂ 20 ಕಿಮೀನಷ್ಟು ನೀರು ಹೋಗಲು ಯಾವುದೇ ತೊಂದರೆ ಇಲ್ಲ. ಎಕ್ಸ್‌ ಪ್ರೆಸ್‌ ಲಿಂಕ್ ಕೆನಾಲ್‌ ಮಾಡುವ ಬದಲು ನಾಲೆ ಅಗಲಿಕರಣ ಮಾಡಿ ನೀರು ತೆಗೆದುಕೊಂಡು ಹೋಗುವುದು ಸೂಕ್ತ. ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪರಿವರ್ತಕಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಕಂಡುಬರುತ್ತಿದೆ. ಈ ಸಮಸ್ಯೆ ಬಗೆಹರಿಯಲಿದೆ ತಾಲೂಕಿನ 125 ಕೋಟಿ ರು. ವೆಚ್ಚದಲ್ಲಿ ಪಟ್ಟಣದಲ್ಲಿ ರಿಸೀವ್ ಸೆಂಟರ್ ಮಾಡುತ್ತಿದ್ದು, ತಾಲೂಕಿನಲ್ಲಿ 7ಸಾವಿರ ಟಿಸಿ ಇರುವ ಕಾರಣ ವಿದ್ಯುತ್ ಸಮಸ್ಯೆ ಉಂಟಾಗಿದೆ. ಯರಬಳ್ಳಿ, ನಲ್ಲೂರು, ತಾಳೆಕೊಪ್ಪ , ಹಂಡನಹಳ್ಳಿ ಸೇರಿದಂತೆ ಹಲವು ಕಡೆ ಎಂಎಸ್ಎಸ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿ, ರೇಖಾ, ನಂದೀಶ್, ನಿಜಗುಣಪ್ಪ, ರಂಗಸ್ವಾಮಿ, ಸಣ್ಣರಂಗಯ್ಯ, ಅನಿತಾಲಕ್ಷ್ಮೀ, ನೇತ್ರಾವತಿ, ರಾಮಲಿಂಗೇಗೌಡ ಪವನ್ ಮತ್ತಿತರರು ಇದ್ದರು.