ಉಕ ಜಿಲ್ಲೆಯಿಂದ ವರದಿಯನ್ನು ವಿರೋಧಿಸಿ ಒಂದು ಲಕ್ಷ ಮನವಿಯನ್ನು ಸಲ್ಲಿಸಲಾಗಿದೆ. ಒಂದು ವೇಳೆ ಕಸ್ತೂರಿರಂಗನ್ ವರದಿ ಜಾರಿಯಾದರೆ ಜಿಲ್ಲೆಯಲ್ಲಿ 3 ಲಕ್ಷ ಕುಟುಂಬಕ್ಕೆ ಮಾರಕವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ 5 ಯೋಜನೆಗಳನ್ನು ಅನುಷ್ಠಾನಗೊಳಿಸಿ 64 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀಡಲಾಗಿದೆ.

ಅಂಕೋಲಾ: ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ, ಈ ಮಾರಕ ಯೋಜನೆ ಜಾರಿ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಅರಣ್ಯ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿ, ಉಕ ಜಿಲ್ಲೆಯಿಂದ ವರದಿಯನ್ನು ವಿರೋಧಿಸಿ ಒಂದು ಲಕ್ಷ ಮನವಿಯನ್ನು ಸಲ್ಲಿಸಲಾಗಿದೆ. ಒಂದು ವೇಳೆ ಕಸ್ತೂರಿರಂಗನ್ ವರದಿ ಜಾರಿಯಾದರೆ ಜಿಲ್ಲೆಯಲ್ಲಿ 3 ಲಕ್ಷ ಕುಟುಂಬಕ್ಕೆ ಮಾರಕವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ 5 ಯೋಜನೆಗಳನ್ನು ಅನುಷ್ಠಾನಗೊಳಿಸಿ 64 ಸಾವಿರ ಹೆಕ್ಟರ್ ಪ್ರದೇಶವನ್ನು ನೀಡಲಾಗಿದೆ ಎಂದರು.

ಕಸ್ತೂರಿರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟ್‌ಲೈಟ್ ಚಿತ್ರಣದ ಆಧಾರದ ಮೇಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರೀಕರಣಕ್ಕೆ ವ್ಯತಿರಿಕ್ತವಾಗಿದೆ. ಗ್ರಾಮದ ಶೇ. 20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ.

ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಸ್ಥಳಕ್ಕೆ ಆಗಮಿಸಿ ಸರ್ವೇ ಕಾರ್ಯ ಮಾಡಿ ವಿಷಯ ಸಂಗ್ರಹಣೆ ಮಾಡಿಲ್ಲ. ಪಶ್ಚಿಮಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿ ಕಾನೂನು ನೀತಿ, ನಿಯಮ ಇರುವುದರಿಂದ ಹೊಸ ಮಾನದಂಡದ ಅವಶ್ಯಕತೆ ಇರುವುದಿಲ್ಲ.

ಇನ್ನು ಅರಣ್ಯ ಅತಿಕ್ರಮಣದಾರರಿಂದ ಗ್ರಾಪಂ ವ್ಯಾಪ್ತಿಯ ಮನೆಟ್ಯಾಕ್ಸ್ ಕೂಡ ತುಂಬಿಸಿಕೊಳ್ಳದಂತೆ ಸೂಚನೆ ನೀಡಿದ್ದಾರೆ. ಹಸಿರು ತುಂಬಿದ ತೋಟವನ್ನು ಕೂಡ ಇವರು ಸೂಕ್ಷ್ಮ ಪ್ರದೇಶವನ್ನಾಗಿ ಗುರುತಿಸಿದ್ದಾರೆ. ಇದು ಜಾರಿಯಾದರೆ ಅರಣ್ಯವಾಸಿಗಳಿಗೆ ನೂರಾರು ಗ್ರಾಮಗಳಿಗೆ ಬಹುದೊಡ್ಡ ಅನ್ಯಾಯವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆ ವಿರುದ್ಧ ನಿರಂತರ ಹೋರಾಟ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡ ಈ ವರದಿಯನ್ನು ರದ್ದುಗೊಳಿಸುವಂತೆ ಮಾಡಬೇಕು ಎಂದರು.

ಆರಂಭದಲ್ಲಿ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ರವೀಂದ್ರ ನಾಯ್ಕ ಹಾರ ಹಾಕಿ ನಂತರ ಅಲ್ಲಿಂದ ಮೆರವಣಿಗೆಯ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದರು. ಯೋಜನೆಯ ವಿರುದ್ಧ ಘೋಷಣೆ ಕೂಗಲಾಯಿತು. ಶಿರಸ್ತೇದಾರ ಗಿರೀಶ ಜಾಂಬಾವಳಿಕರ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ, ಪ್ರಮುಖರಾದ ಉಮೇಶ ನಾಯ್ಕ, ಬಾಲಚಂದ್ರ ಶೆಟ್ಟಿ, ರಮಾನಂದ ನಾಯ್ಕ ಅಚವೆ, ರಾಜೇಶ ಮಿತ್ರಾ ನಾಯ್ಕ, ಉದಯ ಗುನಗಾ, ಚಂದ್ರಕಾಂತ ನಾಯ್ಕ, ನಾಗರಾಜ ನಾಯ್ಕ, ಅರವಿಂದ ಗೌಡ, ವೆಂಕಟ್ರಮಣ ಕೆ. ನಾಯ್ಕ, ವಿನೋದ ನಾಯ್ಕ, ಪಾಂಡು ಗೌಡ, ನಾಗರಾಜ ನಾಯ್ಕ ಸೇರಿದಂತೆ 500ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.