ಹಾವೇರಿ: ನಗರದ ರೈಲ್ವೆ ಸ್ಟೇಷನ್ ಎದುರುಗಡೆ ಮತ್ತು ಮಿನಿವಿಧಾನಸೌಧ ಕಚೇರಿ ಮುಂಭಾಗದಲ್ಲಿರುವ ಮುಖ್ಯ ರಸ್ತೆ ಸುಮಾರು ವರ್ಷಗಳಿಂದ ಹಾಳಾಗಿದ್ದು, ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಗುರುವಾರ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿರುವ ಮುಖಂಡರು, ಈ ರಸ್ತೆ ದುರಸ್ತಿಯಾಗದೆ ಸುಮಾರು ವರ್ಷಗಳಿಂದ ದೊಡ್ಡ ದೊಡ್ಡ ಗುಂಡಿಗಳಿವೆ. ಮಳೆ ನೀರು ನಿಂತು ದೊಡ್ಡ ಗುಂಡಿಗಳಾಗಿವೆ. ಇದರಿಂದ ಬೈಕ್ ಸವಾರರು, ಆಟೋ ಚಾಲಕರು, ರೈಲ್ವೆ ಸ್ಟೇಷನ್‌ಗೆ ಬರುವ ಪ್ರಯಾಣಿಕರ ವಾಹನಗಳು ಪರದಾಡುವಂತಾಗಿದೆ.

ಇಲ್ಲಿಯೇ ದಿನನಿತ್ಯ ವಾಸಿಸುವ ನಾಗರಿಕರು, ಹೋಟೆಲ್, ಕಂಪ್ಯೂಟರ್ ಸೆಂಟರ್ ನಡೆಸುವ ವ್ಯಾಪಾರಸ್ಥರು ಈ ರಸ್ತೆಯ ದುಸ್ಥಿತಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿ ಕೆಸರುಮಯವಾಗುತ್ತದೆ. ಜೋರು ಮಳೆಗೆ ಅಂಗಡಿ, ಮುಂಗಟ್ಟುಗಳ ಒಳಗೆ ನೀರು ನುಗ್ಗುತ್ತದೆ. ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಅನಾರೋಗ್ಯವಾಗುತ್ತಿದೆ. ವ್ಯಾಪಾರವೂ ಕುಂಠಿತವಾಗಿದೆ ಎಂದು ದೂರಿದರು.

ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯನ್ನು ಪರಿಶೀಲಿಸಿ ಇಲ್ಲಿನ ಹಳೆಯ ರಸ್ತೆಯನ್ನು ಸಂಪೂರ್ಣ ತೆರವುಗೊಳಿಸಿ ಹೊಸದಾಗಿ ಸಿಮೆಂಟ್ ರಸ್ತೆ ನಿರ್ಮಿಸಬೇಕು. ಜೊತೆಗೆ ಸಾರ್ವಜನಿಕರ ಓಡಾಟಕ್ಕೆ ಪುಟ್‌ಪಾತ್ ನಿರ್ಮಿಸಬೇಕು ಎಂದು ಒತ್ತಾಯಿಸಿ, ಮನವಿ ಸಲ್ಲಿಸಿದರು. ಈ ವೇಳೆ ಸ್ಟೇಶನ್ ರಸ್ತೆಯಲ್ಲಿರುವ ವಿವಿಧ ಅಂಗಡಿ ಮುಂಗಟ್ಟುಗಳ ಮಾಲೀಕರು, ಹೋಟೆಲ್‌ನವರು ಇದ್ದರು.