ಚುಡಾದಿಂದ ೨೩೬ ನಿವೇಶನ ವಸತಿ ಬಡಾವಣೆಗೆ ಅರ್ಜಿ

| Published : Jan 17 2025, 12:46 AM IST

ಸಾರಾಂಶ

ಚಾಮರಾಜನಗರದ ಚುಡಾ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್‌ ಅಸ್ಗರ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚಾಮರಾಜನಗರ-ಟಿ.ನರಸೀಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಚಾಮರಾಜನಗರ ಮತ್ತು ಮಸಗಾಪುರ ಗ್ರಾಮಗಳಲ್ಲಿ ಒಟ್ಟು ೧೪ಎಕರೆ-೨೪ಗುಂಟೆಯಲ್ಲಿ ೨೩೫ ನಿವೇಶನಗಳ ವಸತಿ ಬಡಾವಣೆಯನ್ನು ನಿರ್ಮಾಣ ಮಾಡುತ್ತಿದ್ದು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಹೇಳಿದರು.ಚುಡಾ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಧಿಕಾರದ ಶೇ.೫೦ರಷ್ಟು ಪಾಲಿನ ವಿವಿಧ ಅಳತೆಯ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನಗಳ ಹಂಚಿಕೆ) ನಿಯಮ-೧೯೯೧ರ ನಿಯಮ ೧೩(೨) ರನ್ವಯ ವಿವಿಧ ಪ್ರವರ್ಗಗಳಡಿಯಲ್ಲಿ ನಿವೇಶನಗಳನ್ನು ಕಡಿಮೆ ದರದಲ್ಲಿ ನೀಡಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದರು.ಚುಡಾ ಆಗಿ ೨೬ ವರ್ಷಗಳ ನಂತರ ಮೊದಲ ಬಾರಿಗೆ ನಿವೇಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ, ನಿವೇಶನಾಕಾಂಕ್ಷಿಗಳು ಶೇ.10ರಷ್ಟು ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಫೆ.೨೮ರೊಳಗಾಗಿ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ ಇವರ ಹೆಸರಿನಲ್ಲಿ ನಗರದ ಇಂಡಿಯನ್ ಬ್ಯಾಂಕ್‌ನಲ್ಲಿ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ., ನಿವೇಶವ ಹಂಚಿಕೆಯಲ್ಲಿ ರೋಸ್ಟರ್ ಪದ್ದತಿ ಅನುಸರಿಸಲಾಗುವುದು ಎಂದರು.

೬.೦ ಮೀ x ೮.೩ ಮೀ ಅಳತೆಯ ನಿವೇಶನಕ್ಕೆ ೬,೬೯,೮೧೦ ರು. ಮೌಲ್ಯ ನಿಗದಿ ಮಾಡಿದ್ದು ಶೇ.೧೦ರಷ್ಟು ಅಂದರೆ ೬೬,೯೮೦ ರು. ಗಳ ಪ್ರಾರಂಭಿಕ ಠೇವಣಿ, ನೋಂದಣಿ ಶುಲ್ಕವಾಗಿ ೧೦೦ ರು.ಗಳನ್ನು ಪಾವತಿಸಬೇಕಿದೆ. ೯.೦ ಮೀ x ೧೫.೦ ಮೀ ಅಳತೆಯ ನಿವೇಶನಕ್ಕೆ ೧೮,೧೫,೭೫೦ ರು. ಮೌಲ್ಯ ನಿಗದಿ ಮಾಡಿದ್ದು ಶೇ. ೧೦ರಷ್ಟು ಅಂದರೆ ೧,೮೧,೫೭೫ ರು. ಗಳ ಪ್ರಾರಂಭಿಕ ಠೇವಣಿ, ನೋಂದಣಿ ಶುಲ್ಕವಾಗಿ ೨೫೦ ರು. ಗಳನ್ನು ಪಾವತಿಸಬೇಕಿದೆ. ೧೨.೦ ಮೀ x ೧೮.೦ ಮೀ ಅಳತೆಯ ನಿವೇಶನಕ್ಕೆ ೨೯,೦೫,೨೦೦ ರು. ಮೌಲ್ಯ ನಿಗದಿ ಮಾಡಿದ್ದು ಶೇ.೧೦ರಷ್ಟು ಅಂದರೆ ೨,೯೦,೫೨೦ ರು. ಗಳ ಪ್ರಾರಂಭಿಕ ಠೇವಣಿ, ನೋಂದಣಿ ಶುಲ್ಕವಾಗಿ ೫೦೦ ರು. ಗಳನ್ನು ಪಾವತಿಸಬೇಕಿದೆ. ಅರ್ಜಿ ಶುಲ್ಕ ೫೦೦ ರು.ಗಳಾಗಿದೆ ಎಂದು ತಿಳಿಸಿದರು. ಪ್ರಾಧಿಕಾರದಿಂದ ನಿವೇಶನಗಳಿಗೆ ನಿಗದಿಪಡಿಸಿರುವ ದರ ಪ್ರತೀ ಚ.ಮೀ ಗೆ ೧೩,೪೫೦ ರು. ಗಳಾಗಿವೆ. (ಚ.ಅಡಿಗೆ ೧೨೫೦ ರು.) ಆಗಿದ್ದು, ನಿವೇಶನಾಕಾಂಕ್ಷಿಗಳು ಚಾಮರಾಜನಗರದ ಇಂಡಿಯನ್ ಬ್ಯಾಂಕಿನಲ್ಲಿ ಅರ್ಜಿ ಪಡೆದು ಶೇ.೧೦ರಷ್ಟು ಶುಲ್ಕ ಮತ್ತು ನೋಂದಣಿ ಶುಲವನ್ನು ಫೆಬ್ರವರಿ ೨೮ರೊಳಗೆ ಪಾವತಿಸಬೇಕಾಗುತ್ತದೆ. ಒಟ್ಟು ೨೩೬ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು. ಹಂಚಿಕೆಯಲ್ಲಿ ರೋಸ್ಟರ್ ಪದ್ದತಿ ಪಾಲಿಸಲಾಗುತ್ತಿದ್ದು ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಹಿಂದುಳಿದವರ್ಗ, ವಿಶೇಷಚೇತನರು, ಸೈನಿಕರು, ಇನ್ನಿತರ ವರ್ಗಗಳು, ಸಾಮಾನ್ಯ ವರ್ಗದವರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಸತಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ನಿವೇಶನಗಳನ್ನು ೩ರಿಂದ ೪ ತಿಂಗಳೊಳಗೆ ನೀಡಲಿದ್ದೇವೆ. ಸಾರ್ವಜನಿಕರು ನಗರಾಭಿವೃದ್ದಿ ಪ್ರಾಧಿಕಾರದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ನಗರದ ಬೆಳವಣಿಗೆಗೆ ಸಹಕರಿಸಬೇಕು ಎಂದು ಚೂಡಾ ಅಧ್ಯಕ್ಷರು ತಿಳಿಸಿದರು.

ಈಗ ಚುಡಾ ವ್ಯಾಪ್ತಿ ೧೪೭೭೩ ಹೆಕ್ಟೇರ್ ವಿಸ್ತೀರ್ಣ ಆಗಿದ್ದು ಹೊಸದಾಗಿ ೬ ಪಂಚಾಯಿತಿಗಳು ಸೇರಿವೆ, ಹರದನಹಳ್ಳಿ, ಚಂದಕವಾಡಿ, ಕೂಸ್ಲೂರು, ಮಾದಾಪುರ ಹಾಗೂ ಬೋಗಾಪುರ, ಬದನಗುಪ್ಪೆ, ಶಿವಪುರ ಪಂಚಾಯಿತಿ ವ್ಯಾಪ್ತಿಯ ಕೆಲ ಪ್ರದೇಶಗಳು ಸೇರಿವೆ ಎಂದರು.ಕೋಡಿಮೋಳೆ ಕೆರೆ ಅಭಿವೃದ್ಧಿ:ಸುಮಾರು ೪.೨೫ ಕೋಟಿ ರು. ವೆಚ್ಚದಲ್ಲಿ ಕೋಡಿಮೋಳೆ ಕೆರೆಯನ್ನು ಅಭಿವೃದ್ದಿಪಡಿಸಿ, ಪ್ರವಾಸೋದ್ಯಮ ಸ್ಥಳವನ್ನಾಗಿ ಮಾಡಲು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದು ಅನುಮತಿ ಸಿಗುವ ವಿಶ್ವಾಸವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು. ಈಗ ಮನೆಗಳನ್ನು ೧೫ ಮೀಟರ್ ಎತ್ತರದವರೆಗೂ ನಿರ್ಮಿಸಬಹುದು, ಪ್ರಾಧಿಕಾರದ ವತಿಯಿಂದ ಕೆಲ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು, ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವತಿಯಿಂದ ಇನ್ನು ಕೆಲ ಬಡಾವಣೆಗಳನ್ನು ನಿರ್ಮಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಯುಕ್ತರಾದ ಸೀಮಾ ಎಚ್.ವಿ. ಉಪ ಆಯುಕ್ತ ನಿತೇಶ್, ಸದಸ್ಯರಾದ ಪುಟ್ಟಸ್ವಾಮಿ, ರಾಜು ಇದ್ದರು.