ಕೊಡಗು ಪತ್ರಕರ್ತರ ಸಂಘ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

| Published : Jun 25 2024, 12:34 AM IST

ಸಾರಾಂಶ

ಒಬ್ಬರು ಒಂದು ಪ್ರಶಸ್ತಿಗೆ ತಮ್ಮ ಒಂದು ವರದಿ ಮಾತ್ರ ಸಲ್ಲಿಸಬೇಕು. ಟಿವಿ ಮಾಧ್ಯಮದವರು ಕೂಡ ಒಂದು ಪ್ರಶಸ್ತಿಗೆ ಒಂದು ವರದಿ ಮಾತ್ರ ಕಳುಹಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಘದಿಂದ ಐದು ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು, ಮುದ್ರಣ ಮಾಧ್ಯಮಕ್ಕೆ ಅತ್ಯುತ್ತಮ ಕ್ರೀಡೆ, ರಾಜಕೀಯ, ಕೃಷಿ ಹಾಗೂ ಗ್ರಾಮೀಣ ವರದಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಸಂಘದ ಹಿರಿಯ ಸಲಹೆಗಾರರಾದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ತಮ್ಮ ತಾಯಿ ರಾಜಲಕ್ಷ್ಮೀ ಗೋಪಾಲಕೃಷ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ದೃಶ್ಯ ಮಾಧ್ಯಮಕ್ಕೆ ಅತ್ಯುತ್ತಮ ಮಾನವೀಯ ವರದಿ ಮತ್ತು ಕೊಡಗಿನ ಜ್ವಲಂತ ಸಮಸ್ಯೆಗಳ ಕುರಿತಾದ ವರದಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕೊಡಗು ಪತ್ರಕರ್ತರ ಸಂಘದ ಸದಸ್ಯರಿಗೆ ಮಾತ್ರ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವರದಿಗಳು 2023ರ ಜನವರಿಯಿಂದ 2023ರ ಡಿಸೆಂಬರ್ ಅಂತ್ಯದೊಳಗೆ ಪ್ರಕಟವಾಗಿರಬೇಕು. ವರದಿಯಲ್ಲಿ ವರದಿಗಾರನ ಹೆಸರು ಇಲ್ಲದಿದ್ದರೆ ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ದೃಢೀಕರಣವಿರಬೇಕು.

ಒಬ್ಬರು ಒಂದು ಪ್ರಶಸ್ತಿಗೆ ತಮ್ಮ ಒಂದು ವರದಿ ಮಾತ್ರ ಸಲ್ಲಿಸಬೇಕು. ಟಿವಿ ಮಾಧ್ಯಮದವರು ಕೂಡ ಒಂದು ಪ್ರಶಸ್ತಿಗೆ ಒಂದು ವರದಿ ಮಾತ್ರ ಕಳುಹಿಸಬಹುದಾಗಿದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ವರದಿಯ ಮೂರು ಜೆರಾಕ್ಸ್ ಪ್ರತಿಗಳು ಮತ್ತು ಟಿವಿ ಮಾಧ್ಯಮದವರು ಪೆನ್ ಡ್ರೈವ್ ಅಥವಾ ಡಿವಿಡಿಯನ್ನು ಜುಲೈ 5ರೊಳಗಾಗಿ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ ಕೊಡಗು ಪತ್ರಕರ್ತರ ಸಂಘ, ಕೇರಾಫ್‌ ಕೊಡಗು ಚಾನಲ್ ಕಚೇರಿ, ಕೋಟೆ ಮಾರಿಯಮ್ಮ ದೇವಾಲಯ ಸಮೀಪ, ಪೆನ್ಷನ್ ಲೇನ್, ಮಡಿಕೇರಿ ಈ ವಿಳಾಸಕ್ಕೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9945411821 ಸಂಪರ್ಕಿಸಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.