ಹಿಂದಿ ಪ್ರಚಾರ ಸಭಾಕ್ಕೆ ಆಡಳಿತಾಧಿಕಾರಿ ನೇಮಕ

| Published : Dec 30 2023, 01:15 AM IST

ಸಾರಾಂಶ

ಇಲ್ಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಮಾಡಿದ್ದು, ಮಾಜಿ ಮೇಯರ್‌ ಈರೇಶ ಅಂಚಟಗೇರಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು.

ಸಭಾದ ಅಧ್ಯಕ್ಷರಾಗಿದ್ದ ಮಾಜಿ ಮೇಯರ್‌ ಈರೇಶ ಅಂಚಟಗೇರಿ ಅವರಿಗೆ ಹಿನ್ನೆಡೆ

ಕನ್ನಡಪ್ರಭ ವಾರ್ತೆ ಧಾರವಾಡ

ಇಲ್ಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಮಾಡಿದ್ದು, ಮಾಜಿ ಮೇಯರ್‌ ಈರೇಶ ಅಂಚಟಗೇರಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು.

ಚುನಾವಣೆ ನಡೆಸದೇ ಸಹಕಾರ ಸಂಘಗಳ ಉಪನಿಯಮದ ವಿರುದ್ಧ ಈರೇಶ ಅಂಚಟಗೇರಿ ಅವರು ಅಧ್ಯಕ್ಷರಾಗಿದ್ದರು ಎಂದು ಹಿಂದಿನ ಆಡಳಿತ ಮಂಡಳಿಯ ರಾಯಪ್ಪ ಬಾಳಪ್ಪ ಪುಡಕಲಕಟ್ಟಿ ಹಾಗೂ ಮಲ್ಲಪ್ಪ ಪುಡಕಲಕಟ್ಟಿ ಸರ್ಕಾರ ಮೊರೆ ಹೋಗಿದ್ದರು. ನಂತರ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಆಡಳಿತ ಮಂಡಳಿಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಈ ಹಿಂದೆಯೇ ಸೂಚಿಸಿತ್ತು. ಚುನಾವಣೆ ನಡೆಸಲು ಸಭಾದ ಕೇಂದ್ರ ಸಮಿತಿಯಿಂದ ವಿಶೇಷ ಕಾರ್ಯದರ್ಶಿ ಸಹ ನೇಮಕ ಮಾಡಿತ್ತು. ಆದರೆ, ಚುನಾವಣೆ ನಡೆದಿರಲಿಲ್ಲ.

ಈಗ ರಾಜ್ಯದಲ್ಲಿ ಸರ್ಕಾರ ಬದಲಾದ ಸಂದರ್ಭದಲ್ಲಿ ಆಡಳಿತ ಮಂಡಳಿಯ ವಿಚಾರವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ ಎಂದು ರಾಯಪ್ಪ, ಮಲ್ಲಪ್ಪ ಪುಡಕಲಕಟ್ಟಿ ಮತ್ತೇ ಸರ್ಕಾರದ ಬೆನ್ನು ಬಿದ್ದಿರುವ ಕಾರಣ ಈ ಬಗ್ಗೆ ಪರಿಶೀಲನಾತ್ಮಕ ವರದಿ ನೀಡುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅಂತೆಯೇ, ಉಪನಿಬಂಧಕರು ವರದಿ ನೀಡಿದ್ದು, 1960ರ ಕಲಂ 27ಎ ಅನ್ವಯ ಸಭಾಕ್ಕೆ ನಿಯಮಬದ್ಧವಾಗಿ ಆಡಳಿತ ಮಂಡಳಿ ನೇಮಕವಾಗಿಲ್ಲ ಎಂಬುದನ್ನು ಪರಿಗಣಿಸಿ ಮುಂದಿನ ಆರು ತಿಂಗಳ ವರೆಗೆ ಧಾರವಾಡ ಉಪವಿಭಾಗಾಧಿಕಾರಿ ಶಾಲಂಹುಸೇನ್‌ ಅವರನ್ನು ಸಭಾದ ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ.

ಹೀಗಾಗಿ ಸದ್ಯ ಅಧ್ಯಕ್ಷರಾಗಿದ್ದ ಈರೇಶ ಅಂಚಟಗೇರಿ ಅವರು ಅನಿವಾರ್ಯವಾಗಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಬೇಕಾಯಿತು. ಸರ್ಕಾರದ ಆದೇಶ ಬರುತ್ತಿದ್ದಂತೆ ಉಪ ವಿಭಾಗಾಧಿಕಾರಿಗಳು ಶುಕ್ರವಾರ ಸಭಾಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ಈ ವಿಷಯದಲ್ಲಿ ಯಾವುದೇ ಗೊಂದಲ-ಗದ್ದಲ ಉಂಟಾಗಬಾರದು ಎಂದು ಎಚ್ಚರಿಕೆ ಕ್ರಮವಾಗಿ ಸಭಾಕ್ಕೆ ಪೊಲೀಸ್‌ ಬಂದೋಬಸ್ತ್‌ ಸಹ ನೀಡಲಾಗಿತ್ತು.