ಕೆಆರ್‌ಎಸ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಅನುಮೋದನೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

| Published : Dec 24 2024, 12:47 AM IST / Updated: Dec 24 2024, 12:41 PM IST

dk shivakumar
ಕೆಆರ್‌ಎಸ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಅನುಮೋದನೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ಸಾರ್ವಜನಿಕ -ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ2,663 ,74  ಕೋಟಿ ರು. ವೆಚ್ಚದಲ್ಲಿ ವಿಶ್ವ ದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಣಗೊಳಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.

 ಮಂಡ್ಯ : ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನ ಉದ್ಯಾನವನ್ನು ಸಾರ್ವಜನಿಕ -ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ 2,663 ,74  ಕೋಟಿ ರು. ವೆಚ್ಚದಲ್ಲಿ ವಿಶ್ವ ದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಣಗೊಳಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಕೃಷ್ಣರಾಜಸಾಗರ ಜಲಾಶಯದ ಕೆಳ ಭಾಗದಲ್ಲಿನ ೧೯೮ ಎಕರೆ ಜಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾದರಿಯಲ್ಲಿ ಉದ್ಯಾನದ ಅಭಿವೃದ್ಧಿ, ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಈ ಬೃಹತ್ ಯೋಜನೆಗೆ ಆರ್ಥಿಕ ಇಲಾಖೆ, ಯೋಜನಾ ಇಲಾಖೆ, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳು ನೀಡಿರುವ ಅಭಿಪ್ರಾಯ ಹಾಗೂ ಸಚಿವ ಸಂಪುಟದ ನಿರ್ಣಯದನ್ವಯ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಮೊದಲ ಕರೆಯಲ್ಲಿ ಯಾವುದೇ ಬಿಡ್‌ಗಳು ಸ್ವೀಕೃತವಾಗದ ಹಿನ್ನೆಲೆಯಲ್ಲಿ ಎರಡನೇ ಕರೆಗೆ ಟೆಂಡರ್ ಪ್ರಕಟಣೆ ಹೊರಡಿಸಲಾಗಿದೆ. ಟೆಂಡರ್ ಸಲ್ಲಿಸಲು 2025 ರ ಜ.16  ಕೊನೆಯ ದಿನವಾಗಿದೆ. ನಾಲ್ಕೂವರೆ ವರ್ಷಗಳ ನಿರ್ಮಾಣ ಅವಧಿ ಹಾಗೂ ನಂತರದ 30 ವರ್ಷಗಳ ನಿರ್ವಹಣಾ ಅವಧಿ ಒಳಗೊಂಡಂತೆ ಒಟ್ಟು 34.5 ವರ್ಷಗಳ ಗುತ್ತಿಗೆ ಅವಧಿಯ ಪ್ರಾವಿಧಾನವಿದ್ದು ಮೂರು ಹಂತಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಏನೇನು ಇರಲಿದೆ?

ಬೊಟಾನಿಕಲ್ ಉದ್ಯಾನ, ಜಂಗಲ್ ಬೋಟ್ ರೈಡ್, ಮೀನಾ ಬಜಾರ್, ಡಾಲ್ ಮ್ಯೂಸಿಯಂ, ಫುಡ್ ಫಾಜಾ, ವಾಟರ್ ಪಾರ್ಕ್, ಲೇಸರ್ ಫೌಂಟೇನ್ ಶೋ, ಹೆಲಿಪ್ಯಾಡ್, ಜೈಹೋ ಫೌಂಟೇನ್, ಬಲೂನ್ ರೈಡ್, ವಾಟರ್ ಪ್ಲೇನ್ ಮತ್ತು ಪ್ಯಾರಾಸೈಲಿಂಗ್, ಟೆಕ್ನೋ ಪಾರ್ಕ್, ಅರೋಮಾ ಗಾರ್ಡನ್, ಟ್ರೀ-ವಾಕ್, ವಾಕ್ಸ್ ಅಂಡ್ ಹಿಸ್ಟಾರಿಕಲ್ ಮ್ಯೂಸಿಯಂ, ಸ್ಕೈಬ್ರಿಡ್ಜ್, ಇಂಡೋರ್ ಅಮ್ಯೂಸ್‌ಮೆಂಟ್ ಪಾರ್ಕ್, ಪೆಂಗ್ವಿನ್ ಝೂ, ಜಂಗಲ್ ಪಾರ್ಕ್, ವಿಶಾಲವಾದ ವಾಹನಗಳ ನಿಲುಗಡೆ ಸ್ಥಳ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮದ್ದೂರಿನಲ್ಲಿ ಕಾರಿಡಾರ್ ಶಾಖಾ ಕಚೇರಿ ಸ್ಥಾಪಿಸಲು ಪರಿಶೀಲನೆ

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಎಂಐಸಿಎಪಿಎ) ಶಾಖಾ ಕಚೇರಿಯನ್ನು ಮದ್ದೂರು ಪಟ್ಟಣದಲ್ಲಿ ಸ್ಥಾಪಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಬಿ.ಎಂ.ಐ.ಸಿ.ಎ.ಪಿ.ಎ. ವ್ಯಾಪ್ತಿಗೆ ಮದ್ದೂರು ಪುರಸಭೆ 2001 ನೇ ಸಾಲಿನಲ್ಲಿ ಸೇರ್ಪಡೆ ಆಗಿದೆ ಎಂದೂ ಹೇಳಿದ್ದಾರೆ.

ಮದ್ದೂರು ಪುರಸಭೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ಬಡಾವಣೆ ನಿರ್ಮಾಣ ಸಂಬಂಧ ಏಕನಿವೇಶನ ಮತ್ತು ಬಹುನಿವೇಶನ ವಿನ್ಯಾಸ ನಕ್ಷೆಗಳಿಗೆ ಬಿಎಂಐಸಿಎಪಿಎಯಿಂದ ಅನುಮತಿ ಪಡೆದುಕೊಳ್ಳಲು ಸಾರ್ವಜನಿಕರು ಬೆಂಗಳೂರು ಕಚೇರಿಗೆ ಅಲೆಯ ಬೇಕಿದ್ದು, ತೀವ್ರ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಮಧು ಜಿ.ಮಾದೇಗೌಡರು ಸರ್ಕಾರದ ಗಮನ ಸೆಳೆದಿದ್ದರು.