ಅರ್ಧ ಶತಮಾನ ಧಾರವಾಡದ ಜನತಾ ಶಿಕ್ಷಣ ಸಮಿತಿಯಲ್ಲಿ ವಿವಿಧ ಹುದ್ದೆ ಅಲಂಕರಿಸಿ, ಸಂಸ್ಥೆಯನ್ನು ಉತ್ತುಂಗಕ್ಕೇರಿಸಿದ ಮಹನೀಯರಲ್ಲಿ ಒಬ್ಬರಾದ ಡಾ. ಅಜಿತ ಪ್ರಸಾದ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವವನ್ನು ಏ. 5ರಂದು ಆಚರಿಸಲಾಗುತ್ತಿದೆ.
ಧಾರವಾಡ:
ಅರ್ಧ ಶತಮಾನ ಇಲ್ಲಿಯ ಜನತಾ ಶಿಕ್ಷಣ ಸಮಿತಿಯಲ್ಲಿ ವಿವಿಧ ಹುದ್ದೆ ಅಲಂಕರಿಸಿ, ಸಂಸ್ಥೆಯನ್ನು ಉತ್ತುಂಗಕ್ಕೇರಿಸಿದ ಮಹನೀಯರಲ್ಲಿ ಒಬ್ಬರಾದ ಡಾ. ಅಜಿತ ಪ್ರಸಾದ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವವನ್ನು ಏ. 5ರಂದು ಆಚರಿಸಲಾಗುತ್ತಿದೆ.ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಹಾಗೂ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಏ. 5ರಂದು ಬೆಳಗ್ಗೆ 9.30ಕ್ಕೆ ಸಂಸ್ಥೆಯ ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರೆಡ್ಡಿ, ಪ್ರೊ. ಎಸ್.ವಿ. ಸಂಕನೂರ, ಮೇಯರ್ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್ಪಿ ಗುಂಜನ್ ಆರ್ಯ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಕವಿವಿ ಕುಲಪತಿ ಡಾ. ಎ.ಎಂ. ಖಾನ್ ಹಾಗೂ ಎಸ್ಡಿಎಂ ಸೊಸೈಟಿಯ ಜೀವಂಧರ ಕುಮಾರ ಭಾಗವಹಿಸುತ್ತಾರೆ ಎಂದರು.1973ರಲ್ಲಿ ಸಂಸ್ಥೆಯ ಗುಬ್ಬಿ ವಿಜ್ಞಾನ ಕಾಲೇಜಿಗೆ ಇತಿಹಾಸ ವಿಷಯ ಪ್ರಾಧ್ಯಾಪಕರಾಗಿ ಸೇವೆ ಶುರು ಮಾಡಿದ ಡಾ. ಅಜಿತ ಪ್ರಸಾದ ಅವರು, ವಿವಿಧ ಹುದ್ದೆ ಏರಿ ಸಂಸ್ಥೆಯನ್ನು ದೊಡ್ಡ ಮಟ್ಟಕ್ಕೆ ತಂದಿಟ್ಟಿದ್ದಾರೆ. ಅವರೊಬ್ಬ ಸ್ನೇಹಜೀವಿ. ಸಂಘಟಿಕರು ಮತ್ತು ಉತ್ತಮ ಆಡಳಿತಾಧಿಕಾರಿಗಳಾಗಿ ಸಂಸ್ಥೆಗೆ ಅಮೋಘ ಕೊಡುಗೆ ಸಲ್ಲಿಸಿದ್ದಾರೆ. ಅವರ ಕಾರ್ಯಕ್ಕೆ ಅನೇಕ ಪ್ರಶಸ್ತಿಗಳು ಸಂದಿದ್ದು, ಅವರ ಕಾರ್ಯ ಸ್ಮರಿಸಲು ಅವರ ವಿದ್ಯಾರ್ಥಿಗಳು, ಅಭಿಮಾನಿಗಳು, ಸಂಸ್ಥೆಯ ಸಿಬ್ಬಂದಿ ಈ ಅಮೃತ ಮಹೋತ್ಸವ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಡಾ. ಸೂರಜ್ ಜೈನ್, ಡಾ. ಜಿನೇಂದ್ರ ಕುಂದಗೋಳ, ಸಾಧನಾ ಎಸ್. ಡಾ. ಬಿ.ಎನ್. ಭಾವಿ ಇದ್ದರು.