ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ವೈಮನಸ್ಸು ಉಂಟಾಗಿ, ವಾಗ್ದಾದ ನಡೆದಿದ್ದು, ಇದರಿಂದ ಮನನೊಂದ ಮಾಲೀಕರ ಪುತ್ರ ಶನಿವಾರ ಟೆಲಿಪೋನ್ ಟವರ್ ಏರಿ ಪ್ರತಿಭಟಿಸಿದ ಘಟನೆ ನವನಗರದ ಸೆಕ್ಟರ್ ನಂಬರ್ 36ರಲ್ಲಿ ನಡೆದಿದೆ.

ಭೀಮು ವಡ್ಡರ ಟೆಲಿಪೋನ್ ಟವರ್ ಏರಿದ ಯುವಕ. ನವನಗರದಲ್ಲಿ ತಮ್ಮ ಮನೆ ಬಾಡಿಗೆ ಪಡೆದಿರುವ ಮಹಿಳೆ ಹಾಗೂ ಭೀಮು ಅವರ ತಂದೆ ನಡುವೆ ಬಾಡಿಗೆ ಒಪ್ಪಂದದ ವಿಚಾರವಾಗಿ ತಂಟೆ ತಕರಾರು ನಡೆದಿದ್ದು, ಶುಕ್ರವಾರ ಇದೇ ವಿಚಾರಕ್ಕೆ ಗಲಾಟೆ ಆಗಿತ್ತು ಎನ್ನಲಾಗಿದೆ. ಬಾಡಿಗೆದಾರರೇ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿ ಯುವಕ ಭೀಮು ಟವರ್ ಏರಿದ್ದ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನವನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ಯುವಕನ ಮನವೊಲಿಸಿ ಟವರ್ ಮೇಲಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.