ಶರಣಾಗಿದ್ದ 6 ನಕ್ಸಲೀಯರಿಗೆ ಸೇರಿದ ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡು ವಶ

| Published : Jan 12 2025, 01:48 AM IST / Updated: Jan 12 2025, 05:13 AM IST

ಸಾರಾಂಶ

ಕಳೆದ ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದ 6 ನಕ್ಸಲೀಯರಿಗೆ ಸೇರಿದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡು ಏನಾಯ್ತು ಎಂಬ ಪ್ರಶ್ನೆ, ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. 

 ಚಿಕ್ಕಮಗಳೂರು : ಕಳೆದ ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದ 6 ನಕ್ಸಲೀಯರಿಗೆ ಸೇರಿದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡು ಏನಾಯ್ತು ಎಂಬ ಪ್ರಶ್ನೆ, ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ನಕ್ಸಲರಿಗೆ ಸೇರಿದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ, ತುಕ್ಕು ಹಿಡಿದಿರುವ ಗನ್‌ಗಳೂ ಪತ್ತೆಯಾಗಿದ್ದು, ನಕ್ಸಲರು ಇಂತಹ ಗನ್‌ಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದರಾ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಿತ್ತಲೆಗುಳಿ ಗ್ರಾಮದ ಬಳಿ ದಟ್ಟ ಅರಣ್ಯದಲ್ಲಿದ್ದ ಮದ್ದು ಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದ್ದಾರೆ. ಇಲ್ಲಿನ ಜಯಪುರ ಪೊಲೀಸ್‌ ಠಾಣೆಯಲ್ಲಿ ಆಯುಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಪರಿಚಿತರು ಎಂದು ನಮೂದಿಸಲಾಗಿದೆ.

ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರ:

ಒಂದು ಎಕೆ 56, ಮೂರು 303 ರೈಫಲ್, ಒಂದು 12 ಬೋರ್ ಎಸ್‌ಎಸ್‌ಬಿಎಲ್, ಒಂದು ಕಂಟ್ರಿಮೇಡ್ ಪಿಸ್ತೂಲ್ ಸೇರಿದಂತೆ ಒಟ್ಟು ಆರು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಇವುಗಳೊಂದಿಗೆ ಹನ್ನೊಂದು 7.62 ಎಂ.ಎಂ.ನ ಎಕೆ 56ರ 11 ಮದ್ದು ಗುಂಡು, 303 ರೈಫಲ್‌ನ 133 ಮದ್ದು ಗುಂಡು, 12 ಬೋರ್ ಕಾರ್ಟಿಜ್ಸ್‌ನ 24, ಕಂಟ್ರಿಮೇಡ್ ಪಿಸ್ತೂಲ್‌ನ 8 ಮದ್ದು ಗುಂಡು ಸೇರಿದಂತೆ ಒಟ್ಟು 176 ಮುದ್ದುಗುಂಡು ವಶಪಡಿಸಿಕೊಳ್ಳಲಾಗಿದೆ. ಇವುಗಳೊಂದಿಗೆ ಎಕೆ 56ನ ಖಾಲಿ ಮ್ಯಾಗಜಿನ್‌ ಸಹ ಪತ್ತೆಯಾಗಿದೆ. ಈ ವೇಳೆ, ತುಕ್ಕು ಹಿಡಿದಿರುವ ಗನ್‌ಗಳೂ ಪತ್ತೆಯಾಗಿವೆ.

ನಕ್ಸಲರು ಶರಣಾಗಿ ಅವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ವಶಕ್ಕೆ ನೀಡಿದರೆ ಅವರಿಗೆ ಸಹಾಯಧನದ ಜತೆಗೆ ಅವರು ವಶಕ್ಕೆ ನೀಡುವ ಶಸ್ತ್ರಾಸ್ತ್ರಗಳಿಗೆ ಇಂತಿಷ್ಟು ಹಣ ನೀಡಲು ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್‌ ವಸತಿ ಯೋಜನೆಯಡಿ ಅವಕಾಶ ನೀಡಲಾಗಿದೆ. ಅದರಂತೆ ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಆಯುಧಗಳಿಗೂ ಸಹಾಯಧನ ನೀಡಲಾಗುವುದು.

ಎಷ್ಟು ಪರಿಹಾರ?:

ಒಂದು ಎಕೆ 56 ಶಸ್ತ್ರಾಸ್ತ್ರಕ್ಕೆ 30 ಸಾವಿರ, 303 ಒಂದು ರೈಫಲ್‌ಗೆ 50 ಸಾವಿರ, 12 ಬೋರ್‌ ಎಸ್‌ಎಸ್‌ಬಿಎಲ್‌ನ ಒಂದು ಗನ್‌ಗೆ 50 ಸಾವಿರ, ಒಂದು ಪಿಸ್ತೂಲ್‌ಗೆ 10 ಸಾವಿರ, ಪ್ರತಿ ಒಂದು ಮದ್ದುಗುಂಡಿಗೆ 100ನಂತೆ ಸಹಾಯಧನ ನೀಡಲಾಗುವುದು.