ಸಾರಾಂಶ
ಯಾವುದೇ ತಪ್ಪು ಮಾಡದ ಸಿ.ಟಿ.ರವಿಯವರನ್ನು ಸಂಶಯದ ಮೇಲೆ ಪೊಲೀಸರು ನಡೆದುಕೊಂಡು ಬಂಧಿಸುವ ಹಾಗೂ ಮಾನಸಿಕ, ದೈಹಿಕ ಹಿಂಸೆ ನೀಡುವ ಕ್ರಮ ಅಮಾನವೀಯವಾಗಿದೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕ, ವಿಪ ಸದಸ್ಯ ಸಿ.ಟಿ.ರವಿ ಅವರ ಮೇಲೆ ನಡೆದ ಹಲ್ಲೆ ಹಾಗೂ ಬಂಧನವನ್ನು ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬಲವಾಗಿ ಖಂಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರ ಘಟಕದ ಅಧ್ಯಕ್ಷ ಪ್ರಶಾಂತ ಜವಳಿ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಈ ಕುರಿತು ಪತ್ರಿಕೆಗೆ ತಮ್ಮ ಅಭಿಪ್ರಾಯ ತಿಳಿಸಿ, ರಾಜ್ಯದಲ್ಲಿ ಕಾಂಗ್ರೆಸ್ ದಬ್ಬಾಳಿಕೆ ನೀತಿ, ಗುಂಡಾಗಿರಿ ರಾಜಕಾರಣ ಮಾಡುತ್ತಿದೆ. ನಾಗರಿಕ ಸಮಾಜದಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಮನಬಂದಂತೆ ನಡೆದುಕೊಳ್ಳುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಬ್ಬ ಮಾಜಿ ಸಚಿವ, ಹಿರಿಯ ನಾಯಕ, ಹಾಲಿ ಶಾಸಕರೊಂದಿಗೆ ಪೊಲೀಸರು ವಿಧಾನ ಪರಿಷತ್ತಿನಲ್ಲಿ ನಡೆದುಕೊಂಡ ರೀತಿ ಅಮಾನವೀಯ ಹಾಗೂ ಕಾನೂನು ಬಾಹಿರ ಕೃತ್ಯವಾಗಿದ್ದು ಇದನ್ನು ಸ್ಥಳೀಯ ಬಿಜೆಪಿ ಘಟಕ ಬಲವಾಗಿ ಖಂಡಿಸುತ್ತದೆ ಎಂದರು.
ಯಾವುದೇ ತಪ್ಪು ಮಾಡದ ಸಿ.ಟಿ.ರವಿಯವರನ್ನು ಸಂಶಯದ ಮೇಲೆ ಪೊಲೀಸರು ನಡೆದುಕೊಂಡು ಬಂಧಿಸುವ ಹಾಗೂ ಮಾನಸಿಕ, ದೈಹಿಕ ಹಿಂಸೆ ನೀಡುವ ಕ್ರಮ ಅಮಾನವೀಯವಾಗಿದೆ. ಇಂತಹ ಘಟನೆಗೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಆರೋಪ ಸಾಬೀತಾಗುವ ಮೊದಲೇ ಅಮಾನವೀಯವಾಗಿ ಕಾಂಗ್ರೆಸ್ ನಡೆದುಕೊಂಡಿದ್ದು ಪ್ರಜಾವಿರೋಧಿ ಕ್ರಮವಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕ ಬಿಜೆಪಿ ಕಾಂಗ್ರೆಸ್ಸಿಗೆ ತಕ್ಕ ಉತ್ತರ ನೀಡಲಿದೆ ಎಂದರು.