ಸಾರಾಂಶ
ಆರೋಪಿಗಳಿಂದ ₹7.5 ಲಕ್ಷ ಮೌಲ್ಯದ 22 ಮೋಟಾರ್ ಬೈಕ್ಗಳ ವಶ । ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾಹಿತಿ
ಕನ್ನಡಪ್ರಭ ವಾರ್ತೆ ಯಾದಗಿರಿಯಾದಗಿರಿ ನಗರ ಸೇರಿದಂತೆ ವಿವಿಧೆಡೆ ಬೈಕ್ಗಳ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ಏಳೂವರೆ ಲಕ್ಷ ರು. ಮೌಲ್ಯದ 22 ಮೋಟಾರು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಲಬುರಗಿ ತಾಲೂಕಿನ ಆಜಾದಪುರದ ಬಾಲಾಜಿ ಹಾಗೂ ಆಳಂದ ತಾಲೂಕಿನ ಯಳಸಂಗಿಯ ಗುರುಶಾಂತ ಎಂಬ ಅರೋಪಿಗಳು ಕಳೆದ ಎರಡು ವರ್ಷಗಳಿಂದ ಬೈಕ್ಗಳನ್ನು ಕಳ್ಳತನ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆಂದು ಹೇಳಿದರು.ಕಳೆದ ಮೇ 29ರಂದು ಇಲ್ಲಿನ ರೈಲ್ವೆ ಸ್ಟೇಷನ್ ಮುಂದೆ ಕುಮಲಯ್ಯ ಕಾವಲಿ ಎಂಬುವವರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಪತ್ತೆಗೆ ತಮ್ಮ ಹಾಗೂ ಹೆಚ್ಚುವರಿ ಎಸ್ ಪಿ. ಧರಣೇಶ, ಡಿವೈಎಸ್ ಪಿ. ಅರುಣಕುಮಾರ ಕೊಳೂರು ಮಾರ್ಗದರ್ಶನದಲ್ಲಿ ಸಿಪಿಐ ಸುನಿಲ ಮೂಲಿಮನಿ ಹಾಗೂ ಪಿಎಸ್ಐ ಮಂಜನಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ತನ್ನ ಸಿಬ್ಬಂದಿಯೊಂದಿಗೆ ಎಲ್ಲೆಡೆ ತನಿಖೆ ನಡೆಸಿ ಈ ಇಬ್ಬರು ಆರೋಪಿಗಳಿಂದ 22 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆಂದು ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದರು.
ಇದರಲ್ಲಿ ಯಾದಗಿರಿ ನಗರದ ಏಳು ಮತ್ತು ಕಲಬುರಗಿ ಸೇರಿದಂತೆಯೇ ವಿವಿಧಡೆ ಕಳ್ಳತನವಾಗಿರುವ ಬೈಕ್ ಗಳು ಸೇರಿವೆ. ಜೂಜಾಟ ಚಟಕ್ಕೆ ಅಂಟಿಕೊಂಡಿರುವ ಈ ಆರೋಪಿಗಳು ಅಲ್ಲಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದರೆಂಬ ಮಾಹಿತಿ ಇದೆ ಎಂದಿದ್ದಾರೆ.ಈ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ, ಜಗನ್ಮಾಥರಡ್ಡಿ, ದಾವಲಸಾಬ್, ವೆಂಕಟೇಶ್, ಗೋವಿಂದ ಇದ್ದರು. ವ್ಯಾಪಾಕ ಜಾಲ ಬೀಸಿದ ಯಾದಗಿರಿ ನಗರದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳ ವಿರುದ್ಧ ಕಲಬುರಗಿ ಚೌಕ್, ಬ್ರಹ್ಮಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಸಿಪಿಐ ಸುನೀಲ್ ಮೂಲಿಮನಿ ತಿಳಿಸಿದರು.