ಹುಬ್ಬಳ್ಳಿಗೆ ಹರಿಹರಪುರ ಶ್ರೀಗಳ ಪುರಪ್ರವೇಶ

| Published : Jul 02 2024, 01:32 AM IST

ಸಾರಾಂಶ

ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಹರಿಹರಪುರದ ಶ್ರೀ ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪುರ ಪ್ರವೇಶಕ್ಕೆ ಸೋಮವಾರ ಅದ್ಧೂರಿ ಸ್ವಾಗತ ದೊರೆಯಿತು.

ಹುಬ್ಬಳ್ಳಿ:

ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಹರಿಹರಪುರದ ಶ್ರೀ ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪುರ ಪ್ರವೇಶಕ್ಕೆ ಸೋಮವಾರ ಅದ್ಧೂರಿ ಸ್ವಾಗತ ದೊರೆಯಿತು.

ಇಲ್ಲಿಯ ಗಬ್ಬೂರ ಕ್ರಾಸ್‌ಗೆ ಶ್ರೀಗಳು ಆಗಮಿಸುತ್ತಿದ್ದಂತೆ ನಗರದಲ್ಲಿ ಶ್ರೀ ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಘೋಷಣೆ ಕೂಗಿದರು. ಅಲ್ಲದೇ, ಕಾರ್ಯಕರ್ತರು ಮತ್ತು ಭಕ್ತರು ಅವರನ್ನು ಸನ್ಮಾನಿಸಿ ಬರಮಾಡಿಕೊಂಡರು. ಇದೇ ವೇಳೆ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು.

ಬಳಿಕ ನಡೆದ ಬೈಕ್‌ ರ್‍ಯಾಲಿ ಮೂಲಕ ಕಾರ್ಯಕರ್ತರು ಕೇಸರಿ ಧ್ವಜ, ಭಗತ್‌ಸಿಂಗ್‌ ಅವರ ಧ್ವಜ ಹಿಡಿದು ರ್‍ಯಾಲಿಗೆ ಕಳೆ ತುಂಬಿದರು. ಗಬ್ಬೂರ ಕ್ರಾಸ್‌ನಿಂದ ಆರಂಭಗೊಂಡ ಬೈಕ್‌ ರ್‍ಯಾಲಿಯು ಬಂಕಾಪುರ ಚೌಕ್‌, ಚೆನ್ನಮ್ಮ ವೃತ್ತ, ಹೊಸೂರ, ಗೋಕುಲ್‌ ರೋಡ್‌ ಮಾರ್ಗವಾಗಿ ಹವ್ಯಕ ಭವನದ ವರೆಗೆ ಬೈಕ್‌ ರ್‍ಯಾಲಿ ನಡೆಯಿತು. ರ್‍ಯಾಲಿ ಮೂಲಕ ಶ್ರೀಗಳು ಹವ್ಯಕ ಭವನಕ್ಕೆ ಬರುತ್ತಿದ್ದಂತೆ ಮಹಿಳೆಯರು ಮತ್ತು ಭಕ್ತರು ಜೈಕಾರ ಹಾಕುವ ಜತೆಗೆ ಮಂತ್ರಪಠಣ ಮಾಡಿ ಸ್ವಾಗತಿಸಿಕೊಂಡರು. ಇದೇ ವೇಳೆ ಗಣ್ಯರು ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ನಂತರ ಶ್ರೀಗಳ ನೇತೃತ್ವದಲ್ಲಿ ಭವನದಲ್ಲಿ ಶ್ರೀಚಕ್ರ ನವಾವರಣ ಪೂಜೆ ನೆರವೇರಿಸಲಾಯಿತು.

ರ್‍ಯಾಲಿಯಲ್ಲಿ ಭಗವತ್ಪಾದಂ ಆಧ್ಯಾತ್ಮಿಕ ಸಂಸ್ಥೆಯ ಗುರೂಜಿ, ಮಲ್ಲಿಕಾರ್ಜುನ ಬಾಳಿಕಾಯಿ, ವೆಂಕಟೇಶ ಕಾಟವೆ, ರಘು ಯಲ್ಲಕ್ಕನವರ, ವಿಶಾಲ ಜಾಧವ, ಗಂಗಾಧರ ಸಂಗಮಶೆಟ್ಟರ, ಯಲ್ಲಪ್ಪ ಬಾಗಲಕೋಟ, ಹನುಮಂತ ಹರ್ತಿ, ನಾರಾಯಣ, ಸುನೀಲ ಕಟ್ಟಿಮನಿ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು.