ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಮತ್ತು ಕೇರಳದ ಧಾರ್ಮಿಕ ಮತ್ತು ಪಾರಂಪರಿಕ ರಾಯಭಾರಿ ಎಂದೇ ಪುರಾತನ ಕಾಲದಿಂದಲೂ ಆಧ್ಯಾತ್ಮಿಕ ಸಂಬಂಧಗಳನ್ನು ಹೊಂದಿರುವ ಕೇರಳದ ಬೈತೂರಪ್ಪನ ಸನ್ನಿಧಿಯಿಂದ ದೇವ ಪ್ರತಿನಿಧಿ ಕೋಮರತಚ್ಚನ್ ( ಕೋರತಜ್ಜ) ಮಗ್ಗುಲ ಗ್ರಾಮಕ್ಕೆ ಆಗಮಿಸಿ ಪಾಲ್ ತಿರಿಕೆ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಒಪ್ಪಿಸಿ ಸಾಂಪ್ರದಾಯಿಕ ವಾಗಿ ಬೈತೂರು ಉತ್ಸವಕ್ಕೆ ಇತ್ತೀಚೆಗೆ ಆಹ್ವಾನ ನೀಡಿದರು.ಕೇರಳದಲ್ಲಿರುವ ಬೈತೂರು ದೇವಸ್ಥಾನ ಕೊಡಗು ಜಿಲ್ಲೆಯ ಅನೇಕ ದೇವನೆಲೆಗಳೊಂದಿಗೆ ಪಾರಂಪರಿಕ ಸಂಬಂಧಗಳನ್ನು ಪೌರಾಣಿಕವಾಗಿ ಹೊಂದಿದ್ದು ದೇವ ಪ್ರತಿನಿಧಿ ಕೋರತಜ್ಜ ಕೊಡಗಿನ ಅನೇಕ ಕಡೆಗಳಿಗೆ ತೆರಳಿ ಉತ್ಸವಕ್ಕೆ ಆಹ್ವಾನ ನೀಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಹಿಂದಿನ ಕಾಲದಲ್ಲಿ ದೇವಾಲಯಗಳು ರಾಜಾಶ್ರಯದಿಂದ ನಡೆಯುತ್ತಿದ್ದ ಕಾರಣಕ್ಕೆ ಅರಮನೆಗೆ ಹೋಗಿ ಆಹ್ವಾನ ನೀಡುವ ಪದ್ದತಿ ಇತ್ತು. ಈಗ ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡಿ ಆಹ್ವಾನಿಸುವ ಸಂಪ್ರದಾಯ ಇದೆ.
ಭಾರತದಲ್ಲಿ ವೈವಿಧ್ಯಮಯ ಧಾರ್ಮಿಕ ಆಚರಣೆಗಳಿದ್ದು ಕೇರಳ ಮತ್ತು ಕೊಡಗಿನ ದೇವನೆಲೆಗಳು ಮತ್ತು ದೈವಿಕ ಆಚರಣೆಗಳು ವೈಶಿಷ್ಟ್ಯತೆಯನ್ನು ಹೊಂದಿವೆ.ಮಗ್ಗುಲ ಗ್ರಾಮಕ್ಕೆ ಕೋಮರತಚ್ಚ ಆಗಮಿಸಿದ ಸಂಧರ್ಭದಲ್ಲಿ ದೇವ ತಕ್ಕರಾದ ಪುಲಿಯಂಡ ತಿಮ್ಮಯ್ಯ, ಓಂಕಾರೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷರಾದ ಪುಲಿಯಂಡ ಜಗದೀಶ್, ಗ್ರಾಮದ ಬೆಂದು ತೆನ್ನಿರ ಮೈನಾ, ಕುಪ್ಪಚ್ಚಿರ ಪೆಮ್ಮಯ್ಯ, ಕುಪ್ಪಚ್ಚಿರ ಸತೀಶ್, ಅಯ್ಯಪ್ಪ, ಬೋಪಣ್ಣ, ಅಭಿಷೇಕ್, ಚೆಂಗಪ್ಪ, ಕೊಟ್ಟಿಯಂಡ ಜೀವನ್ ಚಿಣ್ಣಪ್ಪ, ವಾಟೇರಿರ ಕಾರ್ಯಪ್ಪ, ಪುಲಿಯಂಡ ಉತ್ತಯ್ಯ, ಪೊನ್ನಣ್ಣ, ಡೆನ್ನಿ, ಸಂತೋಷ್, ಕುಪ್ಪಚ್ಚಿರ ಕವಿತಾ, ಅರ್ಚಕರಾದ ಚಂದ್ರ ಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಧಾರ್ಮಿಕ ವಿಧಿವಿಧಾನಗಳೊಂದಗೆ ಕೋಮರತಚ್ಚ ಮತ್ತು ತಂಡದವರನ್ನು ಬರಮಾಡಿಕೊಂಡರು.