ಯಕ್ಷಗಾನ ಪ್ರದರ್ಶನಕ್ಕೆ ಮನಸೋತ ಕಲಾ ರಸಿಕರು

| Published : Apr 20 2024, 01:04 AM IST

ಸಾರಾಂಶ

ಬೆಡಗು ತಿಟ್ಟು ಶೈಲಿಯ ಯಕ್ಷಗಾನದಲ್ಲಿ ಶ್ರೀಕೃಷ್ಣನ ಬಾಲ ಲೀಲೆಗಳ ಪ್ರದರ್ಶನ

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ ಸಂಜೆ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಜನಪದ ಕಲೆಯಾದ ಕರಾವಳಿಯ ಪ್ರಸಿದ್ಧ ಯಕ್ಷಗಾನ ಪ್ರದರ್ಶನವನ್ನು ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ಮತ್ತು ತಂಡವು ಅದ್ಭುತವಾಗಿ ನಡೆಸಿಕೊಡುವ ಮೂಲಕ ಬಯಲು ಸೀಮೆಯ ಜನರಿಗೆ ರಸದೌತಣ ನೀಡಿದರು.

ಬೆಡಗು ತಿಟ್ಟು ಶೈಲಿಯ ಯಕ್ಷಗಾನದಲ್ಲಿ ಶ್ರೀಕೃಷ್ಣನ ಬಾಲ ಲೀಲೆಗಳ ಪ್ರದರ್ಶನ ನೀಡಿದ್ದು ಜನರಿಗೆ ಮುದ ನೀಡಿತು.

ಯಕ್ಷಗಾನ ಪ್ರದರ್ಶನದಲ್ಲಿ ಕೊಳಗಿ ಕೇಶವ ಹೆಗಡೆ ಅವರ ಅದ್ಭುತ ಕಂಠ ಸಿರಿಯಲ್ಲಿ ಇಂಪಾಗಿ ಕೇಳಿ ಬರುತ್ತಿದ್ದ ಗಾಯನಕ್ಕೆ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ನೃತ್ಯ ಪ್ರದರ್ಶನ ನೀಡುತ್ತ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದು ಕಂಡು ಬಂದಿತು.

ಮದ್ದಳೆಯಲ್ಲಿ ಶಂಕರ ಭಾಗವತರ ಕೈ ಚಳಕ ಅಮೋಘವಾಗಿತ್ತು.ಅದರಂತೆ ಗಣೇಶ ಗಾಂವಕರ್ ಅವರ ಚಂಡೆ ವಾದನಕ್ಕೆ ಪ್ರೇಕ್ಷಕರು ಮನಸೋತರು.

ಗಾಯತ್ರಿ ರಾಘವೇಂದ್ರ ನಿರ್ವಹಿಸಿದರೆ ಪ್ರಸಾದನವನ್ನು ವೆಂಕಟೇಶ ಹೆಗಡೆ ಮಾಡಿದರು.