ಸಾರಾಂಶ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಯತಿಕಾರ್ಪ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ರಾಜ್ಯಾದ್ಯಂತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬಗ್ಗೆ ಜಾಗೃತಿ ಮೂಡಿಸುವ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಹಾಕಿಕೊಂಡಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಯತಿರಾಜ್ ಕೆ.ಎಸ್. ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಯತಿಕಾರ್ಪ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ರಾಜ್ಯಾದ್ಯಂತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಬಗ್ಗೆ ಜಾಗೃತಿ ಮೂಡಿಸುವ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಹಾಕಿಕೊಂಡಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಯತಿರಾಜ್ ಕೆ.ಎಸ್. ತಿಳಿಸಿದ್ದಾರೆ.ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.2015ರಲ್ಲಿ ಆರಂಭವಾದ ಯತಿಕಾರ್ಪ್, 2019ರಲ್ಲಿ ಕಾರ್ಪೋರೇಟ್ ಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸಿದೆ. ಭಾರತೀಯ ನೌಕಾಪಡೆ, ಕೈಗಾ ಅಣುಸ್ಥಾವರ, ಎಂಆರ್ಪಿಎಲ್ ಮತ್ತು ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಸೇವೆ ನೀಡುತ್ತಿರುವ ಯತಿಕಾರ್ಪ್, ಇದೀಗ ಎಐ ಕ್ಷೇತ್ರಕ್ಕೆ ಕಾಲಿಟ್ಟಿದೆ ಎಂದವರು ತಿಳಿಸಿದರು.
ತಾವು ಶಿಕ್ಷಣ, ಉದ್ಯಮ ಸೇರಿದಂತೆ 33 ವಿವಿಧ ಕ್ಷೇತ್ರಗಳಿಗೆ ಎಐಯನ್ನು ಪರಿಚಯಿಸುವ ಮೂಲಕ ಈ ತಂತ್ರಜ್ಞಾನವನ್ನು ಸಾರ್ವತ್ರಿಕಗೊಳಿಸಿ, ವಿದ್ಯಾರ್ಥಿಗಳು, ಯುವಜನತೆಯನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಜ್ಜುಗೊಳಿಸಿ, ಹೊಸ ಉದ್ಯೋಗಾವಕಾಶಗಳನ್ನು ತೆರೆದಿಡುತಿದ್ದೇವೆ ಎಂದರು.ಎಐ ಬಗ್ಗೆ ಮಾಹಿತಿ, ತರಬೇತಿಯ ಜೊತೆಗೆ ತಮ್ಮ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ 4 ಮಂದಿಯಂತೆ ರಾಜ್ಯದಲ್ಲಿ 1020 ಮಂದಿಯನ್ನು ಎಐ ರಿಜನಲ್ ರೆಪ್ರಸೆಂಟೇಟಿವ್ ಆಗಿ ನೇಮಕ ಮಾಡಿ, ಅವರಿಗೆ 6 ತಿಂಗಳ ಅಗತ್ಯ ತರಬೇತಿ ನೀಡಿಲಾಗುತ್ತದೆ. ಮೊದಲ 6 ತಿಂಗಳು ಎಐ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕ್ಷೇತ್ರಕಾರ್ಯ ನಡೆಸಬೇಕು, ನಂತರ ಅವರನ್ನು ಕಾಯಂ ಆಗಿ ನೇಮಿಸಲಾಗುತ್ತದೆ ಮತ್ತು 25-30 ಸಾವಿರ ರು. ವೇತನ ನೀಡಲಾಗುತ್ತದೆ ಎಂದು ಹೇಳಿದರು.ದ.ಕ. ಜಿಲ್ಲೆಯ ಆಸಕ್ತರಿಗೆ ಫೆ.12ರಂದು ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಮತ್ತು ಉಡುಪಿ ಜಿಲ್ಲೆಯ ಆಸಕ್ತರಿಗೆ ಫೆ.13ರಂದು ಮಣಿಪಾದ ಮಾಹೆಯ ವಾಣಿಜ್ಯ ವಿಭಾಗದಲ್ಲಿ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನಕ್ಕೆ ಹಾಜರಾಗಬಯುಸುವವರು ತಮ್ಮ ವೈಯಕ್ತಿಕ ವಿವರ (ಬಯೋಡಾಟ), ಆಧಾರ್ ಕಾರ್ಡ್, ಶೈಕ್ಷಣಿಕ ದಾಖಲೆಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ 7349740777ನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕಿ ಕೃಪಾ ಪ್ರಭು, ಮಾನವ ಸಂಪನ್ಮೂಲ ಅಧಿಕಾರಿ ಭೂಮಿಕಾ ಪೂಜಾರಿ ಮತ್ತು ಕಿರಣ್ ಸಿ.ಸಿ. ಉಪಸ್ಥಿತರಿದ್ದರು.