ಹುಬ್ಬಳ್ಳಿ:

ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್ ವತಿಯಿಂದ ಮಹಾವೀರ ಲಿಂಬ್ ಸೆಂಟರ್‌ನ 30ನೇ ಸ್ಥಾಪನಾ ವರ್ಷದ ಅಂಗವಾಗಿ ಸ್ವಾಭಿಮಾನ ದಿನವನ್ನು ನಗರದ ಕೇಶ್ವಾಪುರದ ಸಂಸ್ಕಾರ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಜೈನ್ ಧರ್ಮದ ಧ್ಯೇಯವಾಕ್ಯವಾಗಿರುವ ಬಾಳು ಬಾಳಲು ಬಿಡು ಹಾಗೂ ಅಹಿಂಸಾ ಪರಮೋ ಧರ್ಮ ತತ್ವಗಳನ್ನು ಸ್ಮರಿಸಿದರು. ಸಾನ್ನಿಧ್ಯ ವಹಿಸಿದ್ದ ಆಚಾರ್ಯ ವಿಮಲಸಾಗರ ಸೂರಿಶ್ವರಜಿ ಮಹಾರಾಜ್ ಮಾತನಾಡಿ, ಮಾನವನಿಗೆ ನಿಜವಾದ ಸಂತೋಷ ದಾನದಿಂದಲೇ ಸಿಗುತ್ತದೆ. ದಯೆ, ಕರುಣೆ, ಭಕ್ತಿ ಮತ್ತು ಪರೋಪಕಾರದ ಗುಣಗಳಿಂದ ದಾನದ ಭಾವನೆ ಮೂಡುತ್ತದೆ ಎಂದರು.

ಫೆಡರೇಷನ್‌ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ 350ಕ್ಕೂ ಹೆಚ್ಚು ಶಿಬಿರಗಳ ಮೂಲಕ 55,000ಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಅಂಗಗಳನ್ನು ವಿತರಿಸಿ ಅವರಿಗೆ ಆತ್ಮನಿರ್ಭರ ಜೀವನಕ್ಕೆ ಪ್ರೇರಣೆ ನೀಡಲಾಗಿದೆ ಎಂದರು.

ನಾಕೋಡಾ ತೀರ್ಥ ಮೇವಾನಗರದಿಂದ ದಿವ್ಯಾಂಗ ಸೇವೆಗೆ ಧನ ಸಹಾಯದ ಚೆಕ್ ವಿತರಿಸಲಾಯಿತು. ದಿ. ಪಾರಸಮಲ್ ಬಾಗ್ರೆಚಾ ಅವರ ಸ್ಮರಣಾರ್ಥ ನಿರ್ಮಲಾ ದೇವಿ ಬಾಗ್ರೆಚಾ ಮತ್ತು ಅನಿಲ್ ಬಾಗ್ರೆಚಾ ಲಿಂಬ್ ಸೆಂಟರ್‌ಗೆ ದ್ವಿಚಕ್ರ ವಾಹನ ದಾನವಾಗಿ ನೀಡಿದರು.


ಪದ್ಮವಿಮಲ್ ಸಾಗರಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ, ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಲಿಂಬ್ ಸೆಂಟರ್ ಅಧ್ಯಕ್ಷ ಗೌತಮ್ ಗುಲೆಛಾ ,ಜೈನ ಮರುಧರ್ ಸಂಘದ ಮಾಜಿ ಅಧ್ಯಕ್ಷ ಪುಖ್ರಾಜ್ ಸಾಂಘ್ವಿ, ಅಧ್ಯಕ್ಷ ಜಯಂತಿಲಾಲ್ ಪರ್ಮಾರ್, ಉಕ್ಚಂದ್ ಬಾಫ್ನಾ, ತೇರಾಪಂಥ್ ಸಭಾದ ಅಧ್ಯಕ್ಷ ಪಾರಸ್ಮಲ್ ಬನ್ಸಾಲಿ, ಉದ್ಯಮಿ ವಿಜಯ್ ಶೆಟ್ಟರ್, ಹು-ಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ರಾಜಶೇಖರ್ ಮೆಣಸಿನಕಾಯಿ, ಅನಿಲಕುಮಾರ ಪಾಟೀಲ, ಕಾರ್ಯದರ್ಶಿ ಪ್ರಕಾಶ ಕಟಾರಿಯಾ, ಉಪಾಧ್ಯಕ್ಷ ಅಶೋಕ ಕೊಠಾರಿ ಸೇರಿದಂತೆ ಹಲವರಿದ್ದರು.