ಸಾಗರ: ನೆಲದ ಸಂಸ್ಕೃತಿಯನ್ನು ಕಟ್ಟುವ ಮತ್ತು ಉಳಿಸುವ ಕೆಲಸ ಮಾಡುವ ಶಕ್ತಿ ಇರುವುದು ಕಲಾವಿದರಲ್ಲಿ ಮಾತ್ರ ಎಂದು ವ್ಯಾಸ ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ವಿಭಾಗದ ಮುಖ್ಯಸ್ಥೆ ಡಾ.ಕರುಣಾ ವಿಜಯೇಂದ್ರ ಅಭಿಪ್ರಾಯಪಟ್ಟರು.

ಇಲ್ಲಿನ ನಾಟ್ಯತರಂಗ ಸಂಸ್ಥೆ ಪಟ್ಟಣದ ಶ್ರೀನಗರ ಬಡಾವಣೆಯಲ್ಲಿರುವ ನೃತ್ಯಭಾಸ್ಕರ ಸಭಾಭವನದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಗರ ಒಂದು ಸಾಂಸ್ಕೃತಿಕ ವಲಯ. ಇಲ್ಲಿ ಉತ್ತಮ ಸಹೃದಯರಿದ್ದಾರೆ. ಅವರ ಪ್ರೋತ್ಸಾಹ ಕಲೆಯಲ್ಲಿ ಆಸಕ್ತಿ ಮೂಡಿ ತೊಡಗಿಕೊಳ್ಳುವ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆದು ದೊಡ್ಡ ಕೊಡುಗೆ ನೀಡುವಂತಾಗಲಿದೆ ಎಂದು ಹೇಳಿದರು. ನಗರಸಭೆಯ ಮಾಜಿ ಅಧ್ಯಕ್ಷೆ ಮೈತ್ರಿ ಪಾಟೀಲ್, ಗಣಪತಿ ಅರ್ಬನ್ ಕೋಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ನಾಟ್ಯ ಗುರು ವಿದ್ವಾನ್ ಜನಾರ್ಧನ ಅಧ್ಯಕ್ಷತೆ ವಹಿಸಿದ್ದರು. ಸಮನ್ವಿತಾ, ಸಮದ್ಯತಾ, ವರದಾ ಜನಾರ್ಧನ, ಲಲಿತಾಂಬಿಕಾ ಮತ್ತಿತರರು ಇದ್ದರು. ನಂತರ ಗೌರಿಸಾಗರ್ ಮತ್ತು ಪೃಥ್ವಿ ಪಾರ್ಥಸಾರಥಿಯವರಿಂದ ಪಂಚತಂತ್ರ ಭರತನಾಟ್ಯ ನೃತ್ಯ ರೂಪಕ ಮತ್ತು ಡಾ.ಕರುಣಾ ವಿಜೇಯೇದ್ರ ನೃತ್ಯ ಸಂಯೋಜನೆಯಲ್ಲಿ ವಿದುಷಿ ಡಾ,.ರಮ್ಯ ಸೂರಜ್‌ರವರಿಂದ ದುರ್ಗಾ ಸುಳಾದಿ ಪ್ರಸ್ತುತಿ ಸ್ವಗಾಯನ ಮತ್ತು ನರ್ತನ ಮತ್ತು ವಿದ್ಯಾಲಯದ ಮಕ್ಕಳಿಂದ ಭರತನಾಟ್ಯ ನಡೆಯಿತು.