ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಂದ ನೂತನ ಆರ್‌ಎಸ್‌ಎಸ್ ಕಚೇರಿ ಉದ್ಘಾಟನೆ. ನಾನು ಶಾಸಕನಾಗಿದ್ದ ವೇಳೆ ಹಲವು ಸ್ನೇಹಿತರು ಆರ್‌ಎಸ್‌ಎಸ್ ಕಟ್ಟಡ ನಿರ್ಮಾಣಕ್ಕೆ ಸಹಕಾರ ಕೇಳಿದ್ದರೂ ಅದನ್ನು ಮಾಡಿಕೊಟ್ಟಿದ್ದೇವು. ಈಗಲೂ ಸಹ ನಮ್ಮ ಅಳಿಲು ಸೇವೆಯನ್ನು ಸಂಘದ ಕಟ್ಟಡ ನಿರ್ಮಾಣಕ್ಕೆ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶದ ಲಕ್ಷಾಂತರ ಜನರ ಹೋರಾಟ, ಆರಾಧನೆಯ ಫಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‌ಎಸ್‌ಎಸ್)ನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುವ ಮೂಲಕ ಭಾರತೀಯ ನೂರಾರು ವರ್ಷದ ಕನಸು ನನಸು ಮಾಡಿದ್ದಾರೆ. ಇಡೀ ಜಗತ್ತು ಭಾರತದ ಕಡೆಗೆ ನೋಡುತ್ತಿದ್ದಾರೆ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂತೆ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಆರ್‌ಎಸ್‌ಎಸ್ ಕಟ್ಟಡ ಉದ್ಘಾಟಿಸಲಾಗಿದೆ. ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭದ ಪೂಜಾಕ್ಷತೆಯನ್ನು ಪಡೆಯಲು ಆಗಮಿಸಿದ ವೇಳೆ ಆರ್‌ಎಸ್‌ಎಸ್ ಕಚೇರಿಯನ್ನು ನೋಡಿದೆ ಎಂದರು.

ನಾನು ಶಾಸಕನಾಗಿದ್ದ ವೇಳೆ ಹಲವು ಸ್ನೇಹಿತರು ಆರ್‌ಎಸ್‌ಎಸ್ ಕಟ್ಟಡ ನಿರ್ಮಾಣಕ್ಕೆ ಸಹಕಾರ ಕೇಳಿದ್ದರೂ ಅದನ್ನು ಮಾಡಿಕೊಟ್ಟಿದ್ದೇವು. ಈಗಲೂ ಸಹ ನಮ್ಮ ಅಳಿಲು ಸೇವೆಯನ್ನು ಸಂಘದ ಕಟ್ಟಡ ನಿರ್ಮಾಣಕ್ಕೆ ಮಾಡಿದ್ದೇನೆ. ಇಂತಹ ಉತ್ತಮವಾದ ಕೆಲಸ ಮಾಡುತ್ತಿರುವ ಸಂಘ-ಪರಿವಾದ ಮುಖಂಡರು, ಸ್ನೇಹಿತರ ಜತೆ ನಿಂತು ನೀವು ಹೇಳಿದ ಜವಾಬ್ದಾರಿ ನಿಭಾಹಿಸುತ್ತೇನೆ ಎಂದು ಭರವಸೆ ನೀಡಿದರು.

ನೇತ್ರತಜ್ಞೆ ಡಾ.ಮಣಿಕರ್ಣಿಕ ಅವರು ಸಂಘದ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಾಡಿರುವ ಒಳ್ಳೆಯ ಕೆಲಸ ನೋಡಿ ಮನಸ್ಸು ತುಂಬಿ ಬಂತು. ಜತೆಗೆ ಸಂಘದ ಕಟ್ಟಡ ನಿರ್ಮಾಣಕ್ಕೆ ಹಲವಾರು ಮುಖಂಡರು ಸಹಕಾರ ನೀಡಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ವೇಳೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಕಾರ್‍ಯಕಾರಣಿ ಸದಸ್ಯ ಮಾ.ವೆಂಕಟರಾಮ್, ಜಿಲ್ಲಾ ಮುಖ್ಯ ಸಂಚಾಲಕ ರವಿಕುಮಾರ್, ಶ್ರೀನಾಥ್, ಮೈಸೂರು ವಿಭಾಗದ ಪ್ರಚಾರಕ ಅಕ್ಷಯ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಮಾಜಿ ಅಧ್ಯಕ್ಷ ಉಮೇಶ್, ಮುಖಂಡ ಎಚ್.ಎನ್.ಮಂಜುನಾಥ್, ಜೆ.ಶವಲಿಂಗೇಗೌಡ, ಜಿಲ್ಲಾ ಹಿಂದೂಜಾಗರಣ ವೇದಿಕೆಯ ಪ್ರಮುಖ್ ರತ್ನಾಕರ್ ಸೇರಿದಂತೆ ಆರ್‌ಎಸ್‌ಎಸ್‌ನ ಹಲವಾರು ಮುಖಂಡರು, ಕಾರ್‍ಯಕರ್ತರು ಭಾಗವಹಿಸಿದ್ದರು.