ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಆಯ್ಕೆಗೆ ಚುನಾವಣೆ ನಿಗದಿಯಾಗದಿದ್ದರೂ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಪೂರ್ವಭಾವಿ ಪ್ರಚಾರ ಆರಂಭಿಸಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಂಡ್ಯ ಭಾಗಕ್ಕೆ ಸೇರಿದ ಲಯನ್ ಕೆ.ಟಿ.ಹನುಮಂತು, ಕೃಷ್ಣ ಕೀಲಾರ ಮತ್ತು ಪಣ್ಣೆದೊಡ್ಡಿ ಹರ್ಷ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಆಯ್ಕೆಗೆ ಚುನಾವಣೆ ನಿಗದಿಯಾಗದಿದ್ದರೂ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಪೂರ್ವಭಾವಿ ಪ್ರಚಾರ ಆರಂಭಿಸಿದ್ದಾರೆ.ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಂಡ್ಯ ಭಾಗಕ್ಕೆ ಸೇರಿದ ಲಯನ್ ಕೆ.ಟಿ.ಹನುಮಂತು, ಕೃಷ್ಣ ಕೀಲಾರ ಮತ್ತು ಪಣ್ಣೆದೊಡ್ಡಿ ಹರ್ಷ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಲಯನ್ ಕೆ.ಟಿ.ಹನುಮಂತು ಜಿಲ್ಲಾ ಕಸಾಪ ಅಧ್ಯಕ್ಷ ಗಾಧಿಯ ಮೇಲೆ ಕಣ್ಣಿಟ್ಟಿದ್ದು, ಚುನಾವಣಾ ಪೂರ್ವ ಪ್ರಚಾರ ಆರಂಭಿಸಿದ್ದಾರೆ.ಕೆ.ಆರ್.ಪೇಟೆ ಪಟ್ಟಣ ಮತ್ತು ಕಿಕ್ಕೇರಿಗೆ ಭೇಟಿ ನೀಡಿದ ಹನುಮಂತು ತಾಲೂಕು ಕಸಾಪ ಪ್ರಮುಖರನ್ನು ಭೇಟಿ ಮಾಡಿ ಕರಪತ್ರ ನೀಡಿ ಮುಂಬರುವ ಕಸಾಪ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು.
ಆನಂತರ ಪಟ್ಟಣದ ಆರ್ಟಿಒ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಟ್ರಸ್ಟ್ ಪದಾಧಿಕಾರಿಗಳು ಮತ್ತು ಮಲ್ಲಿಕಾರ್ಜುನ್ ಅಭಿಮಾನಿಗಳ ಸಭೆಗೆ ಆಗಮಿಸಿ ಮತಯಾಚನೆ ಮಾಡಿದರು.ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಭಾಷಿಕರು ನೆಲೆಸಿರುವ ಜಿಲ್ಲೆ ನಮ್ಮದು. ಈ ಜಿಲ್ಲೆಯಲ್ಲಿ ಜನಿಸಿರುವುದ ನನ್ನ ಪೂರ್ವ ಜನುಮದ ಪುಣ್ಯ. ಬೆಂಗಳೂರು ಹೊರತು ಪಡಿಸಿದರೆ ಅತೀಹೆಚ್ಚು ಕಸಾಪ ಮತದಾರರು ನಮ್ಮ ಮಂಡ್ಯ ಜಿಲ್ಲೆಯಲ್ಲಿದ್ದಾರೆ. ಕಸಾಪ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸಾಹಿತಿಗಳು, ಹಿತೈಷಿಗಳು ಮತ್ತು ಗೆಳೆಯರ ಒತ್ತಾಸೆಯ ಮೇರೆಗೆ ನಾನು ಮುಂಬರುವ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿರುವ ನಾನು ಜಿಲ್ಲೆಯಲ್ಲಿ ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿದ್ದೇನೆ. ಹಿರಿಯರು ಮತ್ತು ಕಸಾಪ ಸದಸ್ಯರ ಮಾರ್ಗದರ್ಶನದಲ್ಲಿ ಪರಿಷತ್ತಿನ ಕಾರ್ಯಕ್ರಮಗಳಿಗೆ ಹೊಸ ಕಾಯಕಲ್ಪ ಮತ್ತು ಆಯಾಮ ನೀಡುವ ಜೊತೆಗೆ ಸಾಮರಸ್ಯದ ತಳಹದಿ ಮೇಲೆ ಸಾಹಿತಿಕ ಚಟುವಟಿಕೆಗಳನ್ನು ನಡೆಸುವ ಹಂಬಲ ಹೊಂದಿದ್ದೇನೆ. ಜಿಲ್ಲಾ ಕಸಾಪ ಮತದಾರರು ಅಗತ್ಯ ಬೆಂಬಲ ನೀಡಿ ಮುಂಬರುವ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.ಸಭೆಯಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಕೆ.ಕಾಳೇಗೌಡ, ಕೆ.ಎಸ್.ಸೋಮಶೇಖರ್, ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಹುಸ್ಕೂರು ಕೃಷ್ಣೇಗೌಡ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪದ್ಮೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವೈ.ಆನಂದ ಸೇರಿದಂತೆ ಹಲವು ಕಸಾಪ ಸದಸ್ಯರು ಇದ್ದರು.